ಉದಯವಾಹಿನಿ, ರಾಯಚೂರು: ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ, ರಾಯರ ದರ್ಶನ ಪಡೆದಿದ್ದಾರೆ. ಪ್ರತೀ ವರ್ಷ ಮಧ್ಯಾರಾಧನೆ ವೇಳೆ ಮಂತ್ರಾಲಯಕ್ಕೆ ಭೇಟಿ ನೀಡುವ ಜಗ್ಗೇಶ್ ಈ ಬಾರಿಯೂ ರಾಯರ ಆರಾಧನೆಯಲ್ಲಿ ಭಾಗವಹಿಸಿದ್ದಾರೆ.
ರಾಯರ ದರ್ಶನ ಪಡೆದು ಬಳಿಕ ಮಂತ್ರಾಲಯದಲ್ಲಿ ಮಾತನಾಡಿದ ಅವರು, ಇಂದು ಸಂಜೆ ನಡೆಯಲಿರುವ ತೆಪ್ಪೋತ್ಸವ ನೋಡಿ ಹೋಗಬೇಕು ಎಂದು ಶ್ರೀಗಳು ಸೂಚಿಸಿದ್ದಾರೆ. ಪರಿಮಳ ತೀರ್ಥ ಪುಷ್ಕರಣಿ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಪ್ರತಿ ವರ್ಷದಂತೆ ಮಧ್ಯಾರಾಧನೆಯಲ್ಲಿ ಭಾಗವಹಿಸಲು ಮಂತ್ರಾಲಯಕ್ಕೆ ಬಂದಿದ್ದೇನೆ ಖುಷಿಯಾಗುತ್ತಿದೆ. ಶ್ರೀಗಳ ನೇತೃತ್ವದಲ್ಲಿ ಅವರ ಪರಿಶ್ರಮದಿಂದ ಮಂತ್ರಾಲಯಕ್ಕೆ ಹೈಟೆಕ್ ಟಚ್ ಸಿಕ್ಕಿದೆ. ರಾಯರನ್ನು ವಿದೇಶಗಳಲ್ಲೂ ಭಕ್ತರು ಪೂಜಿಸುತ್ತಿದ್ದಾರೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿ ಮಂತ್ರಾಲಯದ ಬಗ್ಗೆ ಹೇಳಿದ್ದೇನೆ. ರಾಯರ ಮಹಿಮೆ ಬಗ್ಗೆ ಪ್ರಧಾನಿಗೆ ಹೇಳುವ ಆಸೆಯಿತ್ತು. ಪ್ರಪಂಚದಿಂದ ಎಷ್ಟೋ ಬಳುವಳಿಗಳು ನಿಮಗೆ ಬರುತ್ತೆ, ರಾಯರ ಆಶೀರ್ವಾದವೂ ಇರಲಿ ಎಂದು ಶಾಲು, ಮಂತ್ರಾಕ್ಷತೆ ಕೊಟ್ಟಿದ್ದೇನೆ. ಇದಾಗಿ ಒಂದೇ ವಾರದಲ್ಲಿ ಪ್ರಧಾನಿ ಒಂದು ಕಾರ್ಯಕ್ರಮದಲ್ಲಿ ರಾಯರನ್ನ ಕಲಿಯುಗದ ಕಲ್ಪವೃಕ್ಷ ಕಾಮಧೇನುಕಿ ಜೈ ಅಂತ ಸ್ಮರಿಸಿದರು. ರಾಯರು ಮನಸ್ಸು ಮಾಡಿದ್ರೆ ಪ್ರಧಾನಿ ಮೋದಿಯನ್ನೂ ಮಂತ್ರಾಲಯಕ್ಕೆ ಕರೆಸುತ್ತಾರೆ. ರಾಯರ ಶಕ್ತಿಯ ಮುಂದೆ ನಾವೆಲ್ಲಾ ಏನು ಇಲ್ಲ ಎಂದರು.
ಮಂತ್ರಾಲಯದಲ್ಲಿ ಏರೋಡ್ರಮ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಸುಧಾಮೂರ್ತಿ ಹಾಗೂ ನಾನು ಅದರ ಬಗ್ಗೆ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನ ಸದನದಲ್ಲಿ ಇಟ್ಟಿದ್ದೇವೆ. ಮುಂದೊಂದು ದಿನ ಮಂತ್ರಾಲಯದಲ್ಲಿ ಏರೋಡ್ರಮ್ ಆಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!