ಉದಯವಾಹಿನಿ, ದಾವಣಗೆರೆ: ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಬಿಟ್ಟ ವೇಳೆಯೇ ಸೇತುವೆ ಕುಸಿದ ಘಟನೆ ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಬಳಿ ನಡೆದಿದೆ. ಕಳೆದ ಕೆಲ ತಿಂಗಳ ಹಿಂದೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ನೀರು ಬಿಡುತ್ತಿದ್ದಂತೆ ಈಗ ಸೇತುವೆ ಕುಸಿದಿದೆ. ಇದ್ದಕ್ಕಿದ್ದಂತೆ ಸೇತುವೆ ಕುಸಿದಿದ್ದರಿಂದ ರೈತರು ಜಮೀನಿಗೆ ಹೋಗಲು ಪರದಾಡುತ್ತಿದ್ದಾರೆ. ಸೇತುವೆ ಕುಸಿದಿದ್ದರಿಂದ ಜಮೀನಿಗೆ ತೆರಳಲು 10 ಕಿಮೀ ದೂರ ಕ್ರಮಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ರೈತರು ಬೇಸರ ಹೊರಹಾಕಿದ್ದಾರೆ.
ಭತ್ತದ ಬೆಳೆಗೆ ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಬಿಡಲಾಗಿತ್ತು. ಈ ವೇಳೆ ಸೇತುವೆ ಕುಸಿದಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರಿಗೆ ತೀವ್ರ ಸಮಸ್ಯೆ ಎದುರಾಗಿದೆ. ತಕ್ಷಣ ಸೇತುವೆ ನಿರ್ಮಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
