ಉದಯವಾಹಿನಿ, ಕೋಲ್ಕತಾ: ಸಾಲ್ಟ್ ಲೇಕ್ ಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ(Road 22 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಇದರ ಪರಿಣಾಮ ಕಾರು ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಡೆಲಿವರಿ ಏಜೆಂಟ್ ಸೌಮೆನ್ ಮಂಡಲ್ ಸಾವನ್ನಪ್ಪಿದ್ದಾನೆ. ಅಪಘಾತ ನಡೆದು ಒಂದು ದಿನವಾದರೂ ಆರೋಪಿಯನ್ನು ಬಂಧಿಸದೇ ಇರುವುದಕ್ಕೆ ಮಂಡಲ್ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆ ಈಗ ಕೋಲ್ಕತಾದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
ಡೆಲಿವರಿ ಎಕ್ಸಿಕ್ಯೂಟಿವ್ ಮತ್ತು ಬೈಕ್ ಕ್ಯಾಬ್ ಸವಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸೌಮೆನ್ ಮಂಡಲ್ ಬುಧವಾರ ಸಂಜೆ ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಹಿಂಬದಿ ಸವಾರನೊಂದಿಗೆ ದ್ವಿಚಕ್ರ ವಾಹನದಲ್ಲಿ ಸಿಗ್ನಲ್ ಗಾಗಿ ಕಾಯುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಸೌಮೆನ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಸೌಮೆನ್ ಸಮೇತ ಕಾರು ರಸ್ತೆ ಬಳಿಕ ಕಬ್ಬಿಣದ ತಡೆಗೋಡೆಗೆ ಗುದ್ದಿದೆ. ಸುಮೆನ್ ಕಬ್ಬಿಣದ ಕಂಬಿ ಮತ್ತು ಕಾರಿನ ಬಾನೆಟ್ ನಡುವೆ ಸಿಲುಕಿಕೊಂಡು ಒದ್ದಾಡುತ್ತಿದ್ದಾಗಲೇ ಕಾರು ಸ್ಫೋಟಗೊಂಡಿದೆ. ಈ ವೇಳೆ ಸೌಮೆನ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಸೌಮೆನ್ ಜತೆ ಇದ್ದ ಹಿಂಬದಿ ಸವಾರ ಮತ್ತು ಕಾರು ಚಾಲಕ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿದ್ದವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸೌಮೆನ್ ಕಬ್ಬಿಣದ ಕಂಬಿಯಲ್ಲಿ ಸಿಲುಕಿಕೊಂಡೇ ಇದ್ದರು. ಅಪಘಾತದ ಕೆಲವೇ ಕ್ಷಣಗಳಲ್ಲಿ ಕಾರು ಬೆಂಕಿಗೆ ಆಹುತಿಯಾಗಿದ್ದು, ಆತ ಸುಟ್ಟು ಕರಕಲಾಗಿದ್ದಾನೆ. ಸೌಮೆನ್ ಬೈಕ್ನ ಹಿಂಬದಿ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತ ನಡೆದು 12 ಗಂಟೆಗಳಾದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ ಎಂದು ಸೌಮೆನ್ ಮಂಡಲ್ ಅವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅಪಘಾತದ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೌಮೆನ್ ಅವರ ದ್ವಿಚಕ್ರ ವಾಹನ, ಮತ್ತೊಂದು ಬೈಕ್ ಹಾಗು ಕಾರೊಂದು ಸಿಗ್ನಲ್ನಲ್ಲಿ ಕಾಯುತ್ತಿರುವುದು ಕಂಡು ಬಂದಿದೆ. ಬಳಿಕ ವೇಗವಾಗಿ ಬಂದ ಮತ್ತೊಂದು ಕಾರು ಸೌಮೆನ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸೌಮೆನ್ ಮತ್ತು ಹಿಂಬದಿ ಸವಾರ ಇಬ್ಬರೂ ಗಾಳಿಯಲ್ಲಿ ಎಸೆಯಲ್ಪಟ್ಟಿದ್ದಾರೆ. ಸೌಮೆನ್ ರೇಲಿಂಗ್ಗೆ ಡಿಕ್ಕಿಯಾಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
