ಉದಯವಾಹಿನಿ, ಚಾಮರಾಜನಗರ: ಕೆಲವೊಮ್ಮೆ ಮಕ್ಕಳು ಮಾಡುವ ತುಂಟಾಟ ಅಥವಾ ಹೇಳುವ ಸುಳ್ಳುಗಳು ಪಾಲಕರನ್ನು ಪೇಚಿಗೆ ಸಿಲುಕಿಸುತ್ತವೆ. ಅಂಥಹದ್ದೇ ಒಂದು ಪ್ರಕರಣ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಈ ಕೇಸ್​​ನಲ್ಲಿ 10ರ ಪ್ರಾಯದ ಈ ವಿದ್ಯಾರ್ಥಿ ಪಾಲಕರನ್ನು ಮಾತ್ರವಲ್ಲ, ಪೊಲೀಸರನ್ನೂ ತನ್ನ ಸುಳ್ಳಿನಿಂದ ಯಾಮಾರಿಸಿದ್ದಾನೆ.
ತನ್ನನ್ನು ಮೂವರು ಅಪಹರಣ ಮಾಡಿದ್ದರು. ಕಾರಿನಲ್ಲಿ ಕರೆದೊಯ್ದು ಅರ್ಧ ಗಂಟೆಯ ಬಳಿಕ ರಸ್ತೆಯಲ್ಲಿ ಬಿಟ್ಟು ಹೋದರು. 50 ರೂಪಾಯಿ ಕೊಟ್ಟು ಗೋಬಿ, ಐಸ್​​ಕ್ರೀಂ ತಿನ್ನು ಎಂದು ತಾಕೀತು ಮಾಡಿದರು. ಇಲ್ಲವಾದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾನೆ. ಇದನ್ನು ಕೇಳಿಸಿಕೊಂಡ ತಂದೆ ಮಗನನ್ನು ಯಾರೋ ಕಿಡ್ನ್ಯಾಪ್​ ಮಾಡಿದ್ದಾರೆ. ಆತನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ನಗರ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿದ್ಯಾರ್ಥಿಯ ಸಮೇತ ಸ್ಥಳ ಮಹಜರು ನಡೆಸಿದ್ದಾರೆ. ಆದರೆ, ವಿದ್ಯಾರ್ಥಿ ಹೇಳಿದ್ದು ಶುದ್ಧ ಸುಳ್ಳು. ತನ್ನನ್ನು ಕಿಡ್ನಾಪ್​ ಮಾಡಿದ್ದರು ಎಂಬ ಕಥೆ ಕಟ್ಟಲು ‘ಗೋಬಿ ಮಂಚೂರಿ’ ಕಾರಣ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಪ್ರಕರಣದ ವಿವರ: ನಗರದ ಭ್ರಮರಾಂಭ ಪ್ರದೇಶದ ನಿವಾಸಿಯಾದ ಈ ವಿದ್ಯಾರ್ಥಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಸೆಪ್ಟೆಂಬರ್​ 2ನೇ ತಾರೀಖಿನಂದು ಎಂದಿನಂತೆ ಶಾಲೆ ಮುಗಿದ ಬಳಿಕ ಸಂಜೆ ಟ್ಯೂಷನ್​​ಗೆ ತೆರಳಿದ್ದ. ಆದರೆ, ಗೋಬಿ ತಿನ್ನುವ ಆಸೆಯಾಗಿ ಟ್ಯೂಷನ್​ ತಪ್ಪಿಸಿಕೊಂಡು ನಗರಕ್ಕೆ ಆಗಮಿಸಿದ್ದಾನೆ. ಅಲ್ಲಿ ತಿನಿಸು ತಿಂದ ಬಳಿಕ, ತನ್ನ ಮನೆಯ ಪಕ್ಕದ ಮಹಿಳೆಯನ್ನು ಕಂಡಿದ್ದಾನೆ.
ನಗರಕ್ಕೆ ಬಂದ ವಿದ್ಯಾರ್ಥಿಯನ್ನು ಆಕೆ ವಿಚಾರಿಸಿದ್ದಾರೆ. ತಾನು ಟ್ಯೂಷನ್​ ತಪ್ಪಿಸಿಕೊಂಡು ಇಲ್ಲಿಗೆ ಬಂದ ಬಗ್ಗೆ ಮನೆಯವರಿಗೆ ತಿಳಿಸುವ ಭಯದಲ್ಲಿ ಆತ ತನ್ನನ್ನು ಮೂವರು ಕಿಡ್ನ್ಯಾಪ್​ ಮಾಡಿದ್ದರು. ಬಳಿಕ ಇಲ್ಲಿಗೆ ತಂದು ಬಿಟ್ಟರು. ಗೋಬಿ ತಿನ್ನಲು ಹೇಳಿದರು ಎಂದು ತಿಳಿಸಿದ್ದಾನೆ. ಅಪಹರಣ ಮಾಡಲಾಗಿದೆ ಎಂದು ಕೇಳಿದ ಮಹಿಳೆ ತಕ್ಷಣವೇ ವಿದ್ಯಾರ್ಥಿಯ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅದೇ ದಿನ (ಮಂಗಳವಾರ) ರಾತ್ರಿ ನಗರ ಪೊಲೀಸ್​ ಠಾಣೆಯಲ್ಲಿ ಅವರು ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!