ಉದಯವಾಹಿನಿ, ಇಸ್ಲಾಮಾಬಾದ್: ಆಪರೇಷನ್ ಸಿಂದೂರ್ ಕಾರ್ಯಾಚರಣೆಲ್ಲಿ ಭಾರತ, ಪಾಕಿಸ್ತಾನದ ಹಲವು ವಾಯುನೆಲೆಗಳನ್ನು ಧ್ವಂಸಗೊಳಿಸಿತ್ತು. ಅದರಲ್ಲಿ ಪ್ರಮುಖವಾಗಿ ನೂರ್ ಖಾನ್ ವಾಯುನೆಲೆಯೂ ಒಂದು. ಭಾರತದ ಏಟಿಗೆ ಈ ವಾಯುನೆಲೆ ಸಂಪೂರ್ಣವಾಗಿ ನಾಶವಾಗಿತ್ತು. ಇದೀಗ ಮತ್ತೆ ಅದರ ಪುನರ್ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಅದಕ್ಕೆ ಪುಷ್ಟಿ ಎನ್ನುವಂತೆ, ನೂರ್ ಖಾನ್ ವಾಯುನೆಲೆಯ ಉಪಗ್ರಹದ ಚಿತ್ರ ವೈರಲ್ ಆಗಿದೆ. ಇಸ್ಲಾಮಾಬಾದ್ನಿಂದ 25 ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿರುವ ಕಾರ್ಯತಂತ್ರದ ವಾಯುನೆಲೆಯಾದ ನೂರ್ ಖಾನ್, ಪಾಕಿಸ್ತಾನ ವಾಯುಪಡೆಯ ಪ್ರಮುಖ ಏರ್ ಬೇಸ್.
ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತದ ಕ್ಷಿಪಣಿ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯು ನೆಲೆಯ ಮೇಲೆ ನಿಖರ ದಾಳಿ ನಡೆಸಿದ್ದನ್ನು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಒಪ್ಪಿಕೊಂಡಿದ್ದರು. ಮೇ 9 ಮತ್ತು 10ರ ನಡುವಿನ ರಾತ್ರಿ 2.30ಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಸ್ವತಃ ಕರೆ ಮಾಡಿ ಈ ಮಾಹಿತಿ ಹೇಳಿದ್ದರು ಎಂದು ಅವರು ತಿಳಿಸಿದ್ದರು. ಇದರಿಂದ ಸೇನೆ ಮತ್ತು ಖುದ್ದು ಸೇನಾ ಮುಖ್ಯಸ್ಥರು ಭಾರೀ ಆಘಾತಕ್ಕೆ ಒಳಗಾಗಿದ್ದರು. ಕೂಡಲೇ, ಅವರು ರಾವಲ್ಪಿಂಡಿಯಲ್ಲಿರುವ ಜನರಲ್ ಹೆಡ್ ಕ್ವಾಟರ್ಸ್ ನಲ್ಲಿನ ಬಂಕರ್ ಒಳಗೆ ಸ್ಥಳಾಂತರಗೊಂಡಿದ್ದರು ಎಂದು ವರದಿಯಾಗಿದೆ. ಪಾಕಿಸ್ತಾನದ ವಾಯುಸೇನೆಯ ಏರ್ ಮೊಬಿಲಿಟಿ ಕಮಾಂಡ್ ಮುಖ್ಯ ಕಚೇರಿಯೂ ಈ ಭಾಗದಲ್ಲಿದೆ. ದೇಶದ ಹೆಚ್ಚಿನ ವಿಐಪಿಗಳು ನೂರ್ ಖಾನ್ ಏರ್ಬೇಸ್ ನಿಂದಲೇ ಪ್ರಯಾಣಿಸುತ್ತಾರೆ.
