ಉದಯವಾಹಿನಿ, ರಾಯಚೂರು: ರಾಹುಗ್ರಸ್ತ ರಕ್ತಚಂದ್ರಗ್ರಹಣ ಹಿನ್ನೆಲೆ ಬಹಳಷ್ಟು ದೇವಾಲಯಗಳು ಬಂದ್ ಆಗುತ್ತಿವೆ, ಜೊತೆಗೆ ಕೆಲ ದೇವಾಲಯಗಳಲ್ಲಿ ತೀರ್ಥ, ಪ್ರಸಾದ ನಿಲ್ಲಿಸಲಾಗಿದೆ. ಆದರೆ ರಾಯಚೂರು ತಾಲೂಕಿನ ದೇವಸುಗೂರಿನ ಸೂಗೂರೇಶ್ವರ ದೇವಸ್ಥಾನ ಮಾತ್ರ ತನ್ನ ವಿಶಿಷ್ಟವಾದ ವಾಸ್ತುಶಿಲ್ಪದಿಂದಾಗಿ ಗ್ರಹಣ ದೋಷ ಮುಕ್ತವಾಗಿದೆ.
800 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಸುಗೂರೇಶ್ವರ ದೇವಸ್ಥಾನದಲ್ಲಿ ಗ್ರಹಣದೋಷದ ವಾಸ್ತುಶಿಲ್ಪದ ಶಾಸನಗಳು, ಹಾಲಗಂಭಗಳು ಪ್ರತಿಷ್ಟಾಪನೆಯಾಗಿವೆ. ಗ್ರಹಣ ದೋಷ ಮುಕ್ತ ವಾಸ್ತುಶಿಲ್ಪದಿಂದಾಗಿ ರಾಹುಗ್ರಸ್ತ ಚಂದ್ರಗ್ರಹಣ ವೇಳೆಯೂ ದೇವಾಲಯದ ಗರ್ಭಗುಡಿ ಬಾಗಿಲು ಬಂದ್ ಮಾಡುವುದಿಲ್ಲ. ಜೊತೆಗೆ ಎಂದಿನಂತೆ ಎಲ್ಲಾ ಪೂಜೆ ಕೈಂಕರ್ಯಗಳು ಯಾವುದೇ ಅಡ್ಡಿಯಿಲ್ಲದೆ ಸಾಗುತ್ತಿವೆ.
ಇಲ್ಲಿನ ಎರಡು ಶಾಸನಕಂಬಗಳ ಮೇಲೆ ಸೂರ್ಯಚಂದ್ರರ ಕೆತ್ತನೆಗಳಿದ್ದು, 13ನೇ ಶತಮಾನದಿಂದಲೂ ಗ್ರಹಣಮುಕ್ತ ದೇವಾಲಯವಾಗಿದೆ. ಈ ಹಿನ್ನೆಲೆ ಸೂಗೂರೇಶ್ವರ ದೇವಸ್ಥಾನಕ್ಕೆ ಗ್ರಹಣದೋಷ ತಟ್ಟುವುದಿಲ್ಲ, ದೋಷ ಪರಿಹಾರವನ್ನ ಇಲ್ಲಿನ ವಾಸ್ತುಶಿಲ್ಪವೇ ಮಾಡುತ್ತದೆ ಅನ್ನೋ ಪ್ರತೀತಿಯಿದೆ. ಹೀಗಾಗಿ ಚಂದ್ರಗ್ರಹಣ, ಸೂರ್ಯಗ್ರಹಣದ ವೇಳೆಯೂ ಇಲ್ಲಿ ತ್ರಿಕಾಲ ಪೂಜೆಗಳು ನಡೆಯುವುದು ವಿಶೇಷವಾಗಿದೆ.
