ಉದಯವಾಹಿನಿ, ದಾವಣಗೆರೆ: ಚನ್ನಗಿರಿಯಲ್ಲಿ ಚಿಂದಿ ಆಯುವ ನೆಪದಲ್ಲಿ ಬಂದು ಕಳ್ಳತನಕ್ಕೆ ಯತ್ನಿಸಿದ ಮೂವರು ಮಹಿಳೆಯರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಕ್ಕಿಬಿದ್ದ ಕಳ್ಳಿಯರನ್ನು ಕಾವ್ಯ, ರಂಜಿತಾ ಮತ್ತು ಗಿರಿಯಮ್ಮ ಎಂದು ಗುರುತಿಸಲಾಗಿದೆ. ಈ ಮೂವರು ಸೇರಿ ವೆಂಕಟೇಶ್ವರ ಕ್ಯಾಂಪ್ನ ವಿಶ್ವನಾಥ್ ಎಂಬವರ ಮನೆ ಬೀಗ ಒಡೆದಿದ್ದರು. ಬಳಿಕ ಪದ್ಮಾವತಿ ಎಂಬವರ ಮನೆಯ ಬೀಗ ಒಡೆಯುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಗ್ರಾಮಸ್ಥರು ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಸಂತೆಬೆನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
