ಉದಯವಾಹಿನಿ, ಕಠ್ಮಂಡು: ಸಾಮಾಜಿಕ ಮಾಧ್ಯಮ ನಿಷೇಧ ಖಂಡಿಸಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, ನೇಪಾಳದ ವಿವಿಧ ಜೈಲುಗಳಿಂದ ಕೈದಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. 18 ಜಿಲ್ಲೆಗಳಲ್ಲಿ 6,000 ಕ್ಕೂ ಹೆಚ್ಚು ಕೈದಿಗಳು ಜೈಲುಗಳಿಂದ ಪರಾರಿಯಾಗಿದ್ದಾರೆ. ಅನೇಕ ಸ್ಥಳಗಳಲ್ಲಿ ಕೈದಿಗಳು ಜೈಲಿನ ಬಾಗಿಲುಗಳನ್ನು ಮುರಿದಿದ್ದಾರೆ. ಕೆಲವು ಸ್ಥಳಗಳಲ್ಲಿ ಅವರು ಹೊರಬರಲು ಗೋಡೆಗಳನ್ನು ನೆಲಸಮಗೊಳಿಸಿದ್ದಾರೆ.
ಈ ಘಟನೆಯು ದೇಶದಲ್ಲಿ ಈಗಾಗಲೇ ತಲೆದೋರಿರುವ ಅವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರಿಂದಾಗಿ ಅಧಿಕಾರಿಗಳು ನಿಯಂತ್ರಣ ಪಡೆಯಲು ಹೆಣಗಾಡುತ್ತಿದ್ದಾರೆ.
ಶೀತಲ್ ನಿವಾಸ್ ಎಂದೇ ಹೆಸರಾಗಿರುವ ರಾಷ್ಟ್ರಪತಿ ಭವನವನ್ನು ನೇಪಾಳ ಸೇನೆ ವಶಪಡಿಸಿಕೊಂಡಿದೆ. ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಷ್ಟ್ರಪತಿ ಭವನವನ್ನು ಹಾನಿಗೊಳಿಸಿ ಬೆಂಕಿ ಹಚ್ಚಿದರು. ಬಳಿಕ ನೇಪಾಳ ಸೇನೆಯು ಅದನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಜನರ ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ. ಸರ್ಕಾರಿ ಆಸ್ತಿಯ ಮೇಲಿನ ದಾಳಿಯ ಘಟನೆಗಳು ದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿವೆ. ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಈಗ ಪ್ರದೇಶವನ್ನು ಸುತ್ತುವರೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.
