ಉದಯವಾಹಿನಿ, ಇಂಫಾಲ: ಮಣಿಪುರದ ರಾಜಧಾನಿ ಇಂಫಾಲದಲ್ಲಿ ಭಾರೀ ಮಳೆಯಾಗುತ್ತಿದ್ದ ಕಾರಣ ಪ್ರಧಾನಿ ನರೇಂದ್ರ ಮೋದಿಯವರು ರಸ್ತೆ ಮಾರ್ಗದಲ್ಲೇ ಚುರಾಚಾಂದ್‍ಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಮಳೆಯಿಂದಾಗಿ ಹೆಲಿಕಾಪ್ಟರ್ ಹಾರಾಟಕ್ಕೆ ಹವಾಮಾನ ಅನುಕೂಲಕರವಾಗಿಲ್ಲ ಎಂದು ಅಧಿಕಾರಿಗಳು ಪ್ರಧಾನಿಗೆ ಮಾಹಿತಿ ನೀಡಿದರು. ಇದರಿಂದ ಹೆಲಿಕಾಪ್ಟರ್‌ ಬಳಕೆಯನ್ನು ಮೊಟಕುಗೊಳಿಸಲಾಯಿತು. ಬಳಿಕ ಮೋದಿಯವರು ಸುಮಾರು 61 ಕಿ.ಮೀ ಪ್ರಯಾಣ ಮಾಡಿ, ಚುರಾಚಾಂದ್‍ಪುರ ತಲುಪಿದ್ದಾರೆ. ಇದಕ್ಕೂ ಮುನ್ನ ಜನರೊಂದಿಗೆ ಸಂವಹನ ನಡೆಸಲು ಎಷ್ಟೇ ಸಮಯ ಆದರೂ ಪ್ರಯಾಣ ಮಾಡಲು ಸಿದ್ಧ ಎಂದು ಮೋದಿಯವರು ಹೇಳಿದರು ಎಂದು ಮೂಲಗಳು ತಿಳಿಸಿವೆ.
ಚುರಾಚಾಂದ್‍ಪುರದಲ್ಲಿ ತಮ್ಮ ರಸ್ತೆ ಪ್ರಯಾಣದ ಅನುಭವವನ್ನು ಜನರೊಂದಿಗೆ ಹಂಚಿಕೊಂಡಿರುವ ಅವರು, ಮಣಿಪುರದ ಜನರ ಉತ್ಸಾಹಕ್ಕೆ ನಾನು ನಮಸ್ಕರಿಸುತ್ತೇನೆ. ಭಾರೀ ಮಳೆಯಲ್ಲೂ ಇಲ್ಲಿಗೆ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮ ಪ್ರೀತಿಗೆ ನಾನು ಕೃತಜ್ಞ. ಭಾರೀ ಮಳೆಯಿಂದಾಗಿ ನನ್ನ ಹೆಲಿಕಾಪ್ಟರ್‌ನಲ್ಲಿ ಬರಲು ಸಾಧ್ಯವಾಗಲಿಲ್ಲ. ಆದ್ದರಿಂದ ರಸ್ತೆ ಮಾರ್ಗದಲ್ಲಿ ಬಂದೆ. ನಾನು ರಸ್ತೆಯ ಮೂಲಕ ಬಂದಿದ್ದು ಒಳ್ಳೆಯದೇ ಆಯ್ತು ಎಂದು ನನ್ನ ಹೃದಯ ಹೇಳುತ್ತದೆ. ದಾರಿಯುದ್ದಕ್ಕೂ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಎಲ್ಲರೂ ನನ್ನನ್ನು ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!