ಉದಯವಾಹಿನಿ, ಇಂದೋರ್: ಗೆಳತಿಯನ್ನು ಭೇಟಿಯಾಗಲು ಹೋದ ಯುವಕನೊಬ್ಬನನ್ನು ಆಕೆಯ ಕುಟುಂಬ ಸದಸ್ಯರು ಹಿಡಿದು, ಕಟ್ಟಿಹಾಕಿ, ಕ್ರೂರವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಪ್ರಕಾರ, ಈ ಘಟನೆ ಶಿಯೋಪುರ ಜಿಲ್ಲೆಯ ದಬೀಪುರ ಗ್ರಾಮದಲ್ಲಿ ನಡೆದಿದೆ. ಆ ವ್ಯಕ್ತಿಯು ಶಿವಪುರಿ ಜಿಲ್ಲೆಯ ಗುರಿಚಾ ಗ್ರಾಮದ ನಿವಾಸಿಯಾಗಿದ್ದು, ಆತ ದಬೀಪುರದ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಹೀಗಾಗಿ ಆಕೆಯನ್ನು ಭೇಟಿಯಾಗಲು ಅವಳ ಮನೆಗೆ ಹೋಗಿದ್ದನು. ಈ ವಿಚಾರ ಯುವತಿಯ ಕುಟುಂಬ ಸದಸ್ಯರಿಗೆ ತಿಳಿಯುತ್ತಿದ್ದಂತೆ ಅವನನ್ನು ಹಿಡಿದು ಹಗ್ಗದಿಂದ ಕೈಗಳನ್ನು ಕಟ್ಟಿ, ನಂತರ ಅವನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಈ ದೃಶ್ಯದ ವಿಡಿಯೊ ರೆಕಾರ್ಡ್‌ ಕೂಡ ಮಾಡಲಾಗಿದೆ.
ವಿಡಿಯೊದಲ್ಲಿ, ಆ ವ್ಯಕ್ತಿ ಅಳುತ್ತಾ ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು. ಆದರೂ, ಕೂಡ ಯುವತಿಯ ಕುಟುಂಬಸ್ಥರು ಅವನ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದವರು ಅವನಿಗೆ ಸಹಾಯ ಮಾಡುವ ಬದಲು ತಮ್ಮ ಫೋನ್‌ಗಳಲ್ಲಿ ವಿಡಿಯೊ ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಅದಾಗಲೇ ಆ ವ್ಯಕ್ತಿ ಅಲ್ಲಿಂದ ಹೊರಟು ಹೋಗಿದ್ದ.
ಇನ್ನು ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ ರಾಕೇಶ್ ಶರ್ಮಾ, ವಿಷಯ ಬಹಳ ಗಂಭೀರವಾಗಿದ್ದು, ತನಿಖೆ ನಡೆಯುತ್ತಿದೆ. ಸತ್ಯ ಶೀಘ್ರದಲ್ಲೇ ಹೊರಬರಲಿದೆ. ತಪ್ಪಿತಸ್ಥರ ​​ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಪ್ರತ್ಯೇಕ ಘಟನೆಯೊಂದು ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದಿತ್ತು. ಮಹಿಳೆಯೊಬ್ಬಳನ್ನು ವಿವಸ್ತ್ರಗೊಳಿಸಿ, ಮರಕ್ಕೆ ಕಟ್ಟಿ ಹಾಕಿ ಆಕೆಗೆ ನಾಲ್ವರು ಮಹಿಳೆಯರು ಥಳಿಸಿರುವ ಆಘಾತಕಾರಿ ಘಟನೆ ನಡೆದಿತ್ತು. ಭೂ ವಿವಾದದಿಂದಾಗಿ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಈ ಕ್ರೂರ ಕೃತ್ಯದ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಕ್ರಮ ತೆಗೆದುಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!