ಉದಯವಾಹಿನಿ, ನವದೆಹಲಿ: ಬಿಎಂಡಬ್ಲ್ಯೂ ಕಾರು ಡಿಕ್ಕಿಯಾಗಿ ಹಣಕಾಸು ಸಚಿವಾಲಯದ ಅಧಿಕಾರಿ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 24 ಗಂಟೆಯಲ್ಲೇ ಆರೋಪಿಯನ್ನ ಬಂಧಿಸಲಾಗಿದೆ.
ಬಂಧಿತ ಆರೋಪಿ ಮಹಿಳೆಯನ್ನ ಗಗನ್ಪ್ರೀತ್ ಕೌರ್ ಎಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ ಬಾಂಗ್ಲಾ ಸಾಹಿಬ್ ಗುರುದ್ವಾರದಿಂದ ತಮ್ಮ ಬೈಕ್ನಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಿಎಂಡಬ್ಲ್ಯೂ ಕಾರು ಗುದ್ದಿತ್ತು. ಈ ವೇಳೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ನವಜೋತ್ ಸಿಂಗ್ (52) ಸಾವನ್ನಪ್ಪಿದ್ದರು. ಅಪಘಾತ ಮಾಡಿದ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಅಪರಾಧ, ನರಹತ್ಯೆ, ಸಾಕ್ಷ್ಯ ನಾಶ ಮತ್ತು ದುಡುಕಿನ ಚಾಲನೆ ಪ್ರಕರಣಗಳನ್ನ ದಾಖಲಿಸಲಾಗಿದೆ.
38 ವರ್ಷ ವಯಸ್ಸಿನ ಗಗನ್ಪ್ರೀತ್ ಕೌರ್ 40 ವರ್ಷ ವಯಸ್ಸಿನ ಪರೀಕ್ಷಿತ್ ಮಕ್ಕಡ್ ಅವರನ್ನ ವಿವಾಹವಾಗಿದ್ದು, ಗುರುಗ್ರಾಮ್ನಲ್ಲಿ ವಾಸಿಸುತ್ತಿದ್ದಾರೆ. ಜೊತೆಗೆ ಐಷಾರಾಮಿ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದಾರೆ. ಅಪಘಾತ ಸಂದರ್ಭದಲ್ಲಿ ಪತಿ ಪರೀಕ್ಷಿತ್ ಮಕ್ಕಡ್ ಕೂಡ ಇದ್ದರು, ಈ ಕಾರಣಕ್ಕಾಗಿ ಎಫ್ಐಆರ್ನಲ್ಲಿ ಇಬ್ಬರ ಹೆಸರನ್ನ ಉಲ್ಲೇಖಿಸಲಾಗಿದೆ.
