ಉದಯವಾಹಿನಿ, ಭೋಪಾಲ್(ಮಧ್ಯ ಪ್ರದೇಶ): ಸಾಂಪ್ರದಾಯಿಕ ಡೈರಿ ಉತ್ಪನ್ನದ ಸಿಹಿ ತಿಂಡಿಗಳು ಹೆಚ್ಚಿನ ಪ್ರಾಬಲ್ಯ ಹೊಂದಿರುವ ಮಾರುಕಟ್ಟೆಗಳಲ್ಲಿ ಭೋಪಾಲ್ನ ಮಹಿಳಾ ಉದ್ಯಮಿ ಪ್ರತಿಭಾ ತಿವಾರಿ ಅವರ ಸಿಹಿಯೊಂದು ವಿಭಿನ್ನವಾಗಿ ಗಮನ ಸೆಳೆಯುತ್ತಿದೆ. ಇವರದ್ದು ಸಿರಿಧಾನ್ಯಗಳಿಂದ ಕೂಡಿದ ಸಿಹಿ. ಒರಟಾದ ಸಿರಿಧಾನ್ಯಗಳನ್ನು ಕೆನೆಭರಿತ ಐಸ್ಕ್ರೀಂ ಆಗಿ ಇವರು ಪರಿವರ್ತಿಸಿದ್ದಾರೆ. ಇಂಥದ್ದೊಂದು ನಾವೀನ್ಯತೆ ಆಧುನಿಕ ಗ್ರಾಹಕರ ಮನಸ್ಸು ಗೆಲ್ಲುತ್ತಿದೆ.ಅರ್ಕಾ, ಸಾಮೆ ಮತ್ತು ರಾಗಿ ಧಾನ್ಯಗಳನ್ನು ಬಳಸಿ ಪ್ರತಿಭಾ ಸಿರಿಧಾನ್ಯ ಆಧರಿತ ಐಸ್ಕ್ರೀಂ ತಯಾರಿಸುತ್ತಿದ್ದು, ಇವು ಪೌಷ್ಟಿಕಾಂಶದಿಂದ ಕೂಡಿವೆ. ಸಣ್ಣದಾಗಿ ಆರಂಭಿಸಿದ ಈ ಪ್ರಯತ್ನ ವೇಗವಾಗಿ ಬೆಳೆದು ದೊಡ್ಡ ಉದ್ಯಮವಾಗಿ ರೂಪುಗೊಂಡಿದೆ.
ಈ ಐಸ್ ಕ್ರೀಂ ರುಚಿ ಅದ್ಭುತವಾಗಿದೆ. ಅದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಹಾಗಾಗಿ, ಸಿರಿಧಾನ್ಯದ ಐಸ್ ಕ್ರೀಂಗೆ ಬೇಡಿಕೆ ದಿನ ದಿನಕ್ಕೆ ಹೆಚ್ಚುತ್ತಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ವಿಧಾನಸಭೆಯ ಸ್ಪೀಕರ್ ನರೇಂದ್ರ ಸಿಂಗ್ ತೋಮರ್ ಸೇರಿದಂತೆ ಹಲವು ಗಣ್ಯರು ಐಸ್ ಕ್ರೀಂ ಸವಿಯಲು ನಮ್ಮ ಮಳಿಗೆಗೆ ಭೇಟಿ ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಪತ್ನಿ ಜೋಡಿ ಹೇಡನ್ ಕೂಡ ಪಾರ್ಲರ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಐಸ್ ಕ್ರೀಂ ಸವಿದು ಶ್ಲಾಘಿಸಿದರು ಎಂದು ಪ್ರತಿಭಾ ಹೇಳಿದರು. ಮೂರು ವರ್ಷದ ಹಿಂದೆ 5-6 ಲಕ್ಷ ರೂ ಬಂಡವಾಳದಲ್ಲಿ ಸೀಮಿತ ಸಂಪನ್ಮೂಲದೊಂದಿಗೆ ಈ ಪ್ರಯೋಗ ಪ್ರಾರಂಭಿಸಿದವರು ಪ್ರತಿಭಾ. ನಿಧಾನಕ್ಕೆ ಸಂಶೋಧನೆ ಮತ್ತು ಪ್ರಯತ್ನದಿಂದಾಗಿ ಸಿರಿಧಾನ್ಯದ ಐಸ್ಕ್ರೀಂ ಅನ್ನು ಇವರು ಅಭಿವೃದ್ಧಿ ಮಾಡಿದರು. ಇಂದು ತಮ್ಮ ಸಂಸ್ಥೆ 28 ಬಗೆಯ ಉತ್ಪನ್ನಗಳನ್ನು ಉತ್ಪಾದಿಸುತ್ತಿದ್ದು, ಇದರಲ್ಲಿ ಮಿಲ್ಲೆಟ್ ಐಸ್ಕ್ರೀಂ ಹೆಚ್ಚು ಜನಪ್ರಿಯವಾಗಿದೆ.
