ಉದಯವಾಹಿನಿ, ಬೆಂಗಳೂರು: ನಾನು ಸರ್ಕಾರದಲ್ಲಿದ್ದೇನೆ. ಸಮಾಜದವರ ಅಭಿಪ್ರಾಯಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅದು ಅವರ ಅಭಿಪ್ರಾಯ. ಆನಂತರ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ದೆಹಲಿಗೆ ತೆರಳುವ ಮುನ್ನ ಸದಾಶಿವನಗರ ನಿವಾಸದ ಬಳಿ ನಿನ್ನೆ ನಡೆದ ಒಕ್ಕಲಿಗ ಸಮುದಾಯದ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ವಿಚಾರವಾಗಿ ಈಗ ಪ್ರತಿಕ್ರಿಯಿಸುವುದಿಲ್ಲ ಎಂದರು.
ದೆಹಲಿ ಭೇಟಿಯ ಕುರಿತು ಕೇಳಿದಾಗ, ಕಾವೇರಿ ನೀರಿನ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ದಿನಾಂಕ ನಿಗದಿಯಾಗಿದ್ದು, ಈ ಬಗ್ಗೆ ವಕೀಲರುಗಳ ಬಳಿ ಚರ್ಚಿಸಲು ಹಾಗೂ ಒಂದಷ್ಟು ಕೆಲಸಗಳ ಕಾರಣಕ್ಕೆ ತೆರಳುತ್ತಿರುವೆ ಎಂದು ತಿಳಿಸಿದರು.
