ಉದಯವಾಹಿನಿ, ಹಾವೇರಿ: ರಾಜ್ಯಾದ್ಯಂತ ಇಂದಿನಿಂದ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆ ಪ್ರಾರಂಭವಾಗಿದೆ. ಆದರೆ ಹಾವೇರಿಯಲ್ಲಿ ಆರಂಭದಲ್ಲಿಯೇ ತಾಂತ್ರಿಕ ದೋಷ ಉಂಟಾಗಿದ್ದು, ಸಮೀಕ್ಷೆ ಮಾಡುವ ಶಿಕ್ಷಕರು ಪರದಾಡುವಂತಾಗಿತ್ತು. ಹಾವೇರಿಯ ಮಂಜುನಾಥ ನಗರ ಮತ್ತು ಬಸವೇಶ್ವರ ನಗರದಲ್ಲಿ ಸಮೀಕ್ಷೆ ಪ್ರಾರಂಭ ಮಾಡಲಾಗಿತ್ತು. ಸಮೀಕ್ಷೆಯ ಆಪ್ನಲ್ಲಿ ಯುಹೆಚ್ ಐಡಿ ನಂಬರ್ ಹಾಕಿ ಸಬ್ಮಿಟ್ ಅಂತ ಒತ್ತಿದರೆ ಆಪ್ ಓಪನ್ ಆಗುತ್ತಿರಲಿಲ್ಲ. ಬೆಳಗ್ಗೆಯಿಂದ ಸಮೀಕ್ಷೆಗಾಗಿ ಕಾದು ಕುಳಿತಿದ್ದ ಶಿಕ್ಷಕರಿಗೆ ಆಪ್ ಲಿಂಕ್ ಬರೋದು ಕೂಡಾ ವಿಳಂಬವಾಗಿತ್ತು.
ಆಪ್ ಡೌನ್ಲೋಡ್ ಮಾಡಿಕೊಂಡು ಸಮೀಕ್ಷೆಗೆ ತೆರಳಿದ ಶಿಕ್ಷಕರಿಗೆ ಆರಂಭದಲ್ಲೇ ಅಡಚಣೆ ಉಂಟಾಗಿತ್ತು. ಹಾವೇರಿ ಜಿಲ್ಲೆಯಲ್ಲಿ ಸಮೀಕ್ಷೆಗಾಗಿ ಒಟ್ಟು 3,777 ಶಿಕ್ಷಕರ ನಿಯೋಜನೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಕೆಲ ಕಡೆ ಸಮೀಕ್ಷೆ ಯಾವುದೇ ಅಡೆತಡೆಗಳಿಲ್ಲದೇ ಸಾಗಿದೆ. ಆದರೆ ಹಾವೇರಿ ನಗರದಲ್ಲಿಯೇ ಆಪ್ ಓಪನ್ ಆಗದೇ ಶಿಕ್ಷಕರ ಪರದಾಡಿದರು. ಶಿಕ್ಷಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಉಂಟಾದ ತಾಂತ್ರಿಕ ದೋಷವನ್ನು ಸರಿಪಡಿಸಿದರು. ಬಳಿಕ ಶಿಕ್ಷಕರು ಸಮೀಕ್ಷೆಯನ್ನು ಮುಂದುವರಿಸಿದರು.
