ಉದಯವಾಹಿನಿ , ನವದೆಹಲಿ: ಟಿ.ವಿ ವಾಹಿನಿಯೊಂದರ ಚರ್ಚೆಯಲ್ಲಿ ಬಿಜೆಪಿಯ ಮಾಧ್ಯಮ ವಕ್ತಾರರೊಬ್ಬರು ‘ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು’ ಎಂಬ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್, ರಾಹುಲ್ ಗಾಂಧಿಯ ಎದೆಗೆ ಗುಂಡು ಹಾರಿಸಲಾಗುವುದು ಎಂದು ಕೇರಳ ಬಿಜೆಪಿ ವಕ್ತಾರ ಪಿಂಟು ಮಹಾದೇವ್ ಅವರು ಹೇಳಿದ್ದು, ಈ ಕುರಿತು ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಇದನ್ನೂ ಓದಿ: ಬರೇಲಿಯ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯಲ್ಲಿ ಹಿಂಸಾಚಾರ – ಮಾಸ್ಟರ್ ಮೈಂಡ್ ನದೀಮ್ ಅರೆಸ್ಟ್
ಪಕ್ಷದ ತಳಹಂತದ ಪದಾಧಿಕಾರಿಯೊಬ್ಬರು ನೀಡಿರುವ ಕ್ಷುಲ್ಲಕ ಹೇಳಿಕೆ ಇದು ಎಂದು ಅಸಡ್ಡೆ ತೋರಬಾರದು. ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನೀಡಿರುವ ದ್ವೇಷದ ಹೇಳಿಕೆ ಇದಾಗಿದೆ’ ಎಂದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.
‘ಬಿಜೆಪಿಯ ಮಾಧ್ಯಮ ವಕ್ತಾರರಾಗಿ ಟಿ.ವಿ. ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸುವ ಎಬಿವಿಪಿಯ ಮಾಜಿ ಕಾರ್ಯಕರ್ತ ಪಿಂಟು ಮಹಾದೇವ್ ಹೇಳಿಕೆಯನ್ನು ನಿರ್ಲಕ್ಷ್ಯದಿಂದ ನೋಡಬಾರದು. ಅದು ಜೀವ ಬೆದರಿಕೆ’ ಎಂದಿರುವ ವೇಣುಗೋಪಾಲ್, ಆತನ ವಿರುದ್ಧ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
