ಉದಯವಾಹಿನಿ, ಇಸ್ಲಾಮಾಬಾದ್: ಬಲೂಚಿಸ್ತಾನ ಪ್ರತ್ಯೇಕತೆಗಾಗಿ ನಿರಂತರ ಹೋರಾಟಗಳು ನಡೆಯುತ್ತಿರುವ ಪಾಕಿಸ್ತಾನಕ್ಕೆ ಈಗ ಮತ್ತೊಂದು ತಲೆನೋವು ಎದುರಾಗಿದೆ. ಅವಾಮಿ ಕ್ರಿಯಾ ಸಮಿತಿ ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಇತ್ತೀಚಿನ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರತಿಭಟನೆಗಳಲ್ಲಿ ಒಂದಕ್ಕೆ ಸಾಕ್ಷಿಯಾಗುತ್ತಿದೆ.
ʻಶಟ್ಟರ್ ಡೌನ್ & ವ್ಹೀಲ್ ಜಾಮ್ʼ ಅಂದ್ರೆ ಅಂಗಡಿ ಮುಂಗಟ್ಟು, ವಾಹನ ಸಂಚಾರಗಳನ್ನ ಬಂದ್ ಮಾಡುವಂತೆ ಕರೆ ನೀಡಿದ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ಪ್ರತಿಭಟನೆಯ ತೀವ್ರತೆ ಹೆಚ್ಚಾಗ್ತಿದ್ದಂತೆ ಪಾಕ್ ಸರ್ಕಾರ ಪ್ರದೇಶದ ಸುತ್ತ ಭದ್ರತಾ ಪಡೆಗಳನ್ನ ನಿಯೋಜಿಸಿದೆ. ಜೊತೆಗೆ ಹೆಚ್ಚುವರಿ 1,000 ಪೊಲೀಸರನ್ನ ನಿಯೋಜನೆ ಮಾಡಿದೆ. ಮಧ್ಯರಾತ್ರಿಯಿಂದಲೇ ಇಂಟರ್ನೆಟ್ ಸೇವೆಯನ್ನ ಸ್ಥಗಿತಗೊಳಿಸಿದೆ.
ಪಾಕಿಸ್ತಾನದಲ್ಲಿ ನೆಲೆಸಿರುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ 12 ವಿಧಾನಸಭಾ ಸ್ಥಾನಗಳನ್ನ ರದ್ದುಗೊಳಿಸಬೇಕು. ಜಲವಿದ್ಯುತ್ ಒಪ್ಪಂದಗಳ ಮರು ಮಾತುಕತೆ ನಡೆಸಬೇಕು ಜೊತೆಗೆ ಹೆಚ್ಚುತ್ತಿರುವ ಹಣದುಬ್ಬರ ಹೊರೆಯನ್ನ ಕಡಿಮೆ ಮಾಡಲು ತಕ್ಷಣವೇ ಹಿಟ್ಟು (ಗೋದಿ ಹಿಟ್ಟು) ಸಬ್ಸಿಡಿಗಳನ್ನ ಒದಗಿಸಬೇಕು. ಅಲ್ಲದೇ ಇಂಧನ ವೆಚ್ಚ ಕಡಿಮೆ ಮಾಡಲು ಸ್ಥಳೀಯ ಉತ್ಪಾದನಾ ದರಗಳೊಂದಿಗೆ ವಿದ್ಯುತ್ ಸುಂಕವನ್ನು ಸಮೀಕರಿಸಬೇಕು.
ಷರೀಫ್, ಅಸಿಮ್ ಮುನೀರ್ಗೆ ಪುಕ ಪುಕ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಈ ಪ್ರತಿಭಟನೆಗೆ ಯುಎಸ್, ಯುಕೆ ಮತ್ತು ಯುರೋಪ್ನಾದ್ಯಂತ ಇತರ ದೇಶಗಳಲ್ಲಿ ನೆಲೆಸಿರುವ ಪಿಒಕೆ ವಲಸಿಗರು ಕೈ ಜೋಡಿಸುವ ಸಾಧ್ಯತೆಗಳಿವೆ. ಹೀಗಾಗಿ ಇದು ವ್ಯಾಪಕವಾಗಿ ಬೆಳೆಬಹುದು ಅನ್ನೋ ಕಳವಳ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.
