ಉದಯವಾಹಿನಿ, ಹಾಸನ: ಜಾತಿಗಣತಿಗೆ ತೆರಳುವಾಗ ನಾಯಿಗೆ ಶಿಕ್ಷಕಿಯ ಸ್ಕೂಟರ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಹೊಳೆನರಸೀಪುರದ ವಡ್ಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ವಡ್ಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಧಾ ಗಾಯಗೊಂಡವರು. ಬೆಳಗ್ಗೆ 10 ಗಂಟೆ ಸಮಯದಲ್ಲಿ ಅವರು ಸಮೀಕ್ಷೆಗೆ ತೆರಳುತ್ತಿದ್ದರು. ಈ ವೇಳೆ ಅವರ ಸ್ಕೂಟರ್ಗೆ ನಾಯಿ ಅಡ್ಡ ಬಂದಿದ್ದು, ಡಿಕ್ಕಿಯಾಗಿ ಬಿದ್ದಿದ್ದಾರೆ. ರಸ್ತೆಗೆ ಬಿದ್ದಿದ್ದರಿಂದ ಅವರಿಗೆ ಗಂಭಿರ ಗಾಯಗಳಾಗಿವೆ. ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದ ಶಿಕ್ಷಕಿಗೆ ಸ್ಥಳೀಯರು ಉಪಚಾರ ಮಾಡಿದ್ದಾರೆ. ಬಳಿಕ ಅವರನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಜಾತಿಗಣತಿಗೆ ತೆರಳುವವರಿಗೆ ನಾಯಿಗಳ ಉಪಟಳ ಹೆಚ್ಚಾಗಿದೆ. ಬೇಲೂರಿನ ಜೈಭೀಮ್ ನಗರದಲ್ಲಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಯೊಬ್ಬರಿಗೆ ಬೀದಿನಾಯಿಗಳು ಕಚ್ಚಿ ಗಂಭಿರವಾಗಿ ಗಾಯಗೊಳಿಸಿದ್ದವು. ಈ ವೇಳೆ ಕಾಪಾಡಲು ಬಂದಿದ್ದ ಶಿಕ್ಷಕಿಯ ಪತಿ ಸೇರಿ ಇನ್ನಿತರ 7 ಜನರನ್ನು ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
