ಉದಯವಾಹಿನಿ, ಶಿಮ್ಲಾ: ವಧುವೊಬ್ಬಳನ್ನು ಭಾರತೀಯ ಯೋಧರು ಅತ್ಯಂತ ಆದರದಿಂದ ಹಸೆಮಣೆಯತ್ತ ಕರೆದುಕೊಂಡು ಬರುತ್ತಿರುವ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಗಿದೆ. ಒಗ್ಗಟ್ಟು ಮತ್ತು ಸಹೋದರತ್ವದ ಭಾವನಾತ್ಮಕ ವಿಡಿಯೊದಲ್ಲಿ, ಹುತಾತ್ಮ ಯೋಧನ ಸಹೋದರಿಗೆ ಅಣ್ಣಂದಿರ ಪಾತ್ರವನ್ನು ನಿರ್ವಹಿಸಿದ್ದಾರೆ. ಇದನ್ನು ನೋಡಿದ ವಧು (bride) ಮತ್ತು ಅತಿಥಿಗಳು ತೀವ್ರ ಭಾವುಕರಾಗಿದ್ದಾರೆ. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ.
ವಧು ಆರಾಧನಾ ಸಿರ್ಮೌರ್ ಜಿಲ್ಲೆಯ ತನ್ನ ಹುಟ್ಟೂರು ಭರ್ಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ವಿಶೇಷ ದಿನವು ಸಂತೋಷದಿಂದ ತುಂಬಿದ್ದರೂ, ಅವರ ಸಹೋದರ ಆಶಿಶ್ ಕುಮಾರ್ ಅನುಪಸ್ಥಿತಿಯು ಅವರನ್ನು ತೀವ್ರವಾಗಿ ಕಾಡಿದೆ. 2024ರ ಫೆಬ್ರವರಿಯಲ್ಲಿ ಅರುಣಾಚಲ ಪ್ರದೇಶದಲ್ಲಿ ನಡೆದ ಆಪರೇಷನ್ ಅಲರ್ಟ್ ಸಮಯದಲ್ಲಿ ಭಾರತೀಯ ಸೇನೆಯ ವೀರ ಸೈನಿಕ ಆಶಿಶ್ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಹುತಾತ್ಮ ಸೈನಿಕನ ಸಹೋದರಿಯ ಮದುವೆಗೆ ಅವರ ಉಪಸ್ಥಿತಿಯನ್ನು ತುಂಬಲು ರೆಜಿಮೆಂಟ್ನ ಸದಸ್ಯರು ಮತ್ತು ಮಾಜಿ ಸೈನಿಕರು ಮುಂದೆ ಬಂದರು. ವಧು ಆರಾಧನಾಳನ್ನು ಮಂಟಪಕ್ಕೆ ಕರೆದೊಯ್ಯುವುದು, ವಿವಾಹದ ಆಚರಣೆಗಳ ಸಮಯದಲ್ಲಿ ಅವಳ ಪಕ್ಕದಲ್ಲಿ ನಿಲ್ಲುವುದು ಮತ್ತು ಸಮಾರಂಭದ ನಂತರ ಅವಳ ಅತ್ತೆಯ ಮನೆಗೆ ಕರೆದೊಯ್ಯುವುದು ಸೇರಿದಂತೆ ಸಹೋದರರು ಸಾಂಪ್ರದಾಯಿಕವಾಗಿ ನಿರ್ವಹಿಸುವ ಕರ್ತವ್ಯಗಳನ್ನು ಸೈನಿಕರು ವಹಿಸಿಕೊಂಡರು. ಸೈನಿಕರು ಸಹೋದರನ ಕರ್ತವ್ಯಗಳನ್ನು ನಿರ್ವಹಿಸಿರುವುದು ಸಾಂತ್ವನ ಮತ್ತು ಹೆಮ್ಮೆಯ ಭಾವನೆಯನ್ನು ತಂದಿತು. ಮದುವೆಯನ್ನು ಆಶಿಶ್ ಅವರ ತ್ಯಾಗಕ್ಕೆ ಪ್ರಬಲ ಗೌರವವಾಗಿ ಪರಿವರ್ತಿಸಲಾಯಿತು. ಇದನ್ನು ನೋಡಿದ ಅತಿಥಿಗಳು ಕಣ್ಣೀರು ಹಾಕಿದರು.
