ಉದಯವಾಹಿನಿ, ಚೆನ್ನೈ: ಕರೂರು ಕಾಲ್ತುಳಿತ ಪ್ರಕರಣದ ತನಿಖೆ ನಡೆಸಲು ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ತಮಿಳಗ ವೆಟ್ರಿ ಕಳಗಂ ಪಕ್ಷ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ವಕೀಲರಾದ ದೀಕ್ಷಿತಾ ಗೋಹಿಲ್, ಪ್ರಾಂಜಲ್ ಅಗರ್ವಾಲ್ ಮತ್ತು ಯಶ್ ಎಸ್ ವಿಜಯ್ ಅವರು ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ನೇತೃತ್ವದ ಎಸ್ಐಟಿ ತನಿಖೆಯ ಬದಲು ಉನ್ನತ ನ್ಯಾಯಲಯದ ನಿವೃತ ನ್ಯಾಯಮೂರ್ತಿ ನೇತೃತ್ವದಲ್ಲಿ ಘಟನೆಯ ಸ್ವತಂತ್ರ ತನಿಖೆ ನಡೆಸಲು ಮನವಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ಈ ಅರ್ಜಿ ವಿಚಾರಣೆಗೆ ಸಮ್ಮತಿ ಸೂಚಿಸಿದ್ದು, ಅ.10ರಂದು ವಿಚಾರಣೆ ನಡೆಸುವುದಾಗಿ ದಿನಾಂಕ ನಿಗದಿಪಡಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಜಿ.ಎಸ್.ಮಣಿ ಅವರು ಸುಪ್ರೀಂಕೋರ್ಟ್ನಲ್ಲಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದು, ಈ ಪ್ರಕರಣದ ಬಗ್ಗೆ ಕೇಂದ್ರ ತನಿಖಾ ದಳ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ಪೈಕಿ ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸುಪ್ರೀಂಕೋರ್ಟ್ನಲ್ಲಿ ಮೂರು ಅರ್ಜಿಗಳು ದಾಖಲಾಗಿವೆ. ಈ ನಡುವೆ ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬಸ್ಥರ ಭೇಟಿಯಾಗಿ ಸಾಂತ್ವನ ಹೇಳಲು ಹಾಗೂ ಕರೂರಿಗೆ ಭೇಟಿ ನೀಡಲು ನಟ ವಿಜಯ್ ಅನುಮತಿ ಕೇಳಿದ್ದಾರೆ. ತಮಿಳುನಾಡು ಪೊಲೀಸ್ ಮಹಾ ನಿರ್ದೇಶಕರಿಗೆ ಇಮೇಲ್ ಮೂಲಕ ಅನುಮತಿ ಕೇಳಿದ್ದು, ಮಂಗಳವಾರ (ಅ.7) ವಿಡಿಯೋ ಕಾಲ್ ಮೂಲಕ ಮೃತರ ಕುಟುಂಬಸ್ಥರಿಗೆ ವಿಜಯ್ ಸಾಂತ್ವಾನ ಹೇಳಿದ್ದರು.
