ಉದಯವಾಹಿನಿ,ಬೆಂಗಳೂರು: ಸಿನಿಮಾ ಬಿಡುಗಡೆಯನ್ನು ಕಾತುರದಿಂದ ಕಾಯುತ್ತಿರುವ ರಕ್ಷಿತ್ ಶೆಟ್ಟಿ, ತಮ್ಮದೇ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ರಿಚರ್ಡ್ ಆಂಟೋನಿ ಸಿನಿಮಾದಲ್ಲೂ ವ್ಯಸ್ತರಾಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯ ನಂತರ ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ನಿರ್ದೇಶನದ ಸಿನಿಮಾದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಿದ್ದಾರೆ. ಈ ನಡುವೆ ವೀಕ್ಷಕರೊಂದಿಗೆ ಸಂವಾದ ನಡೆಸುವಂತಹ ಸರಣಿ ವೀಡಿಯೋಗಳ ಮೂಲಕ ರಕ್ಷಿತ್ ಶೆಟ್ಟಿ ಸಿನಿ ಆಸಕ್ತರನ್ನು ಆಹ್ವಾನಿಸಿದ್ದು, ಈ ವೀಡಿಯೋದಲ್ಲಿ ಪುರಾತನ ಪುರಾಣಗಳು, ಇತಾಸಗಳು ಮತ್ತು ಪೂಜ್ಯ ದೇವತೆಯಾದ ಪರಶುರಾಮನನ್ನು ಅಧ್ಯಯನ ಮಾಡಿದ ಅಂಶಗಳಿವೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ, ರಕ್ಷಿತ್ ಶೆಟ್ಟಿ, ನಾ ಕಂಡಂತೆ”ಸರಣಿಯ ವೀಡಿಯೊಗಳನ್ನು ಪ್ರಾಚೀನ ಕಾಲದ ವೈಜ್ಞಾನಿಕ ಅಧ್ಯಯನಗಳ ತಾತ್ವಿಕ ಪ್ರಾತಿನಿಧ್ಯ ಎಂದು ವಿವರಿಸಿದ್ದಾರೆ. ಈ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಅವರು, 3-4 ನಿಮಿಷಗಳಿರುವ 10 ಭಾಗಗಳ ವೀಡಿಯೋಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ. ಈ ಭಾಗಗಳಲ್ಲಿನ ಅಂಶಗಳಿಂದ ಗ್ರಾಹಕರು ರಿಚರ್ಡ್ ಆಂಟೋನಿ ಸಿನಿಮಾ ಕುರಿತಂತೆ ಆಳವಾಗಿ ಅರ್ಥ ಮಾಡಿಕೊಳ್ಳಬಹುದೆಂಬುದು ರಕ್ಷಿತ್ ಶೆಟ್ಟಿ ನಿರೀಕ್ಷೆಯಾಗಿದೆ.
