ಉದಯವಾಹಿನಿ, ಬೆಂಗಳೂರು: ಆರ್‌ಎಸ್‌ಎಸ್‌ ಚಟುವಟಿಕೆಗಳ ನಿಯಂತ್ರಣಕ್ಕೆ ಮುಂದಾಗಿದ್ದ ಸರ್ಕಾರ ಈಗ ಇಟ್ಟ ಹೆಜ್ಜೆಯಿಂದ ಹಿಂದಕ್ಕೆ ಸರಿದಿದೆ. ಹೊಸ ಬಿಲ್‌ಗೆ ಸರ್ಕಾರ ರೆಡ್ ಸಿಗ್ನಲ್ ನೀಡಿದೆ. ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪತ್ರಕ್ಕೆ ಸಂಬಂಧಿಸಿದಂತೆ ಈಗ ನಾವು ಆದೇಶ ಪ್ರಕಟಿಸಿದ್ದೇವೆ. ಹೊಸ ಮಸೂದೆಯನ್ನು ಮಂಡನೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಹೊಸ ಮಸೂದೆ ಸಿಎಂ, ಡಿಸಿಎಂ ಸೇರಿದಂತೆ ಹಿರಿಯ ಸಚಿವರು ಆಕ್ಷೇಪ ವ್ಯಕ್ತಪಡಿಸಿರುವ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.

ಏನು ಚರ್ಚೆ ನಡೆದಿದೆ?: ಕಳೆದ ವಾರದ ಕ್ಯಾಬಿನೆಟ್‌ ಸಭೆಯಲ್ಲಿ ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನಿಯಂತ್ರಿಸುವಂತೆ ಪ್ರಿಯಾಂಕ್‌ ಖರ್ಗೆ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಿತು.ಈ ವೇಳೆ ಸರ್ಕಾರಿ ಆದೇಶ ಹೊರಡಿಸಿದರೆ ಸಾಕು. ಸುಮ್ಮನೇ ಈ ವಿಚಾರವನ್ನು ಎಳೆದಾಡುವ ಅಗತ್ಯವಿಲ್ಲ. ಸದ್ಯಕ್ಕೆ ಯಾವ ಮಸೂದೆ ಬೇಡ. ನಾವು ಈಗ ಕ್ರಮ ಕೈಗೊಂಡರೆ ಆರ್‌ಎಸ್‌ಎಸ್‌ಗೆ ಸುಮ್ಮನೇ ಪ್ರಚಾರ ನೀಡಿದಂತೆ ಆಗುತ್ತದೆ ಎಂದು ಪ್ರಿಯಾಂಕ್ ಖರ್ಗೆಗೆ ಸಿಎಂ, ಡಿಸಿಎಂ ಸೇರಿ ಹಲವು ಹಿರಿಯ ಸಚಿವರು ಕಿವಿಮಾತು ಹೇಳಿದ್ದಾರೆ.
ರೆಗ್ಯುಲೇಷನ್ ಆಫ್ ಯೂಸ್ ಆಫ್ ಗವರ್ನಮೆಂಟ್ ಪ್ರಿಮಿಸಿಸ್ ಅಂಡ್ ಪ್ರಾಪರ್ಟೀಸ್ ಬಿಲ್ – 2025ರ ಕರಡು ರೆಡಿಯಾಗಿದ್ದರೂ ಈ ಮಸೂದೆಯನ್ನು ಮಂಡನೆ ಮಾಡುವುದು ಬೇಡ ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜಕೀಯ ಜಗಳ ಬೇರೆ, ಸಿದ್ಧಾಂತದ ಜಗಳ ಎರಡೂ ಬೇರೆ ಬೇರೆ. ಮಸೂದೆ ಮಂಡನೆ ಮಾಡಲೇಬೇಕಾದರೆ ಅದು ನಿಮ್ಮಿಷ್ಟ ಎಂದು ಡಿಸಿಎಂ ತಿಳಿಸಿದರು.
ಈ ಬಿಲ್‌ ಜಾರಿಯಾದರೆ ಆರ್‌ಎಸ್‌ಎಸ್‌ಗೆ ಮಾತ್ರವಲ್ಲ, ಎಲ್ಲದಕ್ಕೂ ಎಲ್ಲರಿಗೂ ಅನ್ವಯ ಆಗುತ್ತದೆ. ಇದರಿಂದ ಮತ್ತಷ್ಟು ಸಂಕಷ್ಟ ಎದುರಾಗುತ್ತದೆ. ಹೀಗಾಗಿ ಈ ಬಿಲ್‌ ಮಂಡನೆ ಮಾಡುವುದು ಬೇಡ ಎಂದು ಹಿರಿಯ ಸಚಿವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕ್ಯಾಬಿನೆಟ್ ಚರ್ಚೆಯ ಅಭಿಪ್ರಾಯವನ್ನೇ ಮುಂದಿಟ್ಟುಕೊಂಡು ಸರ್ಕಾರ ಈಗ ಮಸೂದೆಯನ್ನು ತಿರಸ್ಕರಿಸಿದೆ ಎಂಬ ವಿಚಾರವನ್ನು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!