ಉದಯವಾಹಿನಿ, ಬೆಂಗಳೂರು: ಟಿವಿ9ನ ‘ಏನ್ ರೋಡ್ ಗುರು’ ಅಭಿಯಾನದ ಬಳಿಕ ಎಚ್ಚೆತ್ತಿರುವ ಜಿಬಿಎ , ಇದೀಗ ರಾಜಧಾನಿಯ ಹಲವು ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯವನ್ನು ಕೈಗೊಂಡಿದೆ. ಬೆಂಗಳೂರಿನ ಹಲವು ಪ್ರಮುಖ ರಸ್ತಗಳ ಗುಂಡಿಗಳನ್ನು ಮುಚ್ಚುವ ಕೆಲಸ ಭರದಿಂದ ಸಾಗಿದೆ. ಇದರ ಮಧ್ಯೆ ಸ್ವತಃ ಜನರ ಸಮಸ್ಯೆಗಳನ್ನು ಆಲಿಸುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ರ ಸಲಹೆ ಜಿಬಿಎ ಕೆಲಸದ ವೇಗವನ್ನು ಇನ್ನಷ್ಟು ಹೆಚ್ಚಿಸಿದೆ.
ಮಾಗಡಿ ರಸ್ತೆ, ಸುಮ್ಮನಹಳ್ಳಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಬೃಹತ್ ಗುಂಡಿಗಳಿಂದ ಹದಗೆಟ್ಟಿದ್ದವು. ವಾಹನ ಸವಾರರು ಸಂಚಾರದ ವೇಳೆ ತೊಂದರೆ ಅನುಭವಿಸುತ್ತಿದ್ದರು. ಜನರ ಈ ಸಮಸ್ಯೆಗೀಗ ಬ್ರೇಕ್ ಬಿದ್ದಿದೆ. ಜಿಬಿಎ ರಸ್ತೆಗಳಿಗೆ ಟಾರ್ ಹಾಸಿ ತೇಪೆ ಹಚ್ಚಿ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭಿಸಿದೆ.
ಸರ್ಕಾರವು ನಗರದಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಲು ಡೆಡ್ಲೈನ್ ನೀಡಿತ್ತು. ಡಿಸಿಎಂ ಡಿ.ಕೆ. ಶಿವಕುಮಾರ್ ಆಗಾಗ ಸಿಟಿ ರೌಂಡ್ಗಳನ್ನು ನಡೆಸುತ್ತಾ, ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ. ರಸ್ತೆಗುಂಡಿಗಳ ವಿಚಾರದಲ್ಲೂ ಬೆಂಗಳೂರಿಗರು ಈ ಹಿಂದೆ ಡಿಸಿಎಂ ಎದುರು ಸಮಸ್ಯೆ ಬಿಚ್ಚಿಟ್ಟಿದ್ದರು. ಅವರ ಸಲಹೆಯಿಂದ ಜಿಬಿಎ ಕಾರ್ಯದ ವೇಗ ಇನ್ನಷ್ಟು ಹೆಚ್ಚಾಗಿದೆ.
ರಾಜಧಾನಿಯ ಜನರ ಜೊತೆ ನೇರ ಸಂಪರ್ಕ ಸಾಧಿಸಲು ಡಿಸಿಎಂ ‘ಬೆಂಗಳೂರು ನಡಿಗೆ’ ಕಾರ್ಯಕ್ರವನ್ನು ಮುಂದುವರಿಸಿದ್ದಾರೆ. ಇಂದು ಬೆಳಗ್ಗೆ 7 ಗಂಟೆಗೆ ಹೇರೋಹಳ್ಳಿಯ ಗಾಂಧಿ ಉದ್ಯಾನವನದಲ್ಲಿ ನಡೆಯುವ ಈ ನಡಿಗೆಯಲ್ಲಿ ಡಿಕೆಶಿ ಪಾಲ್ಗೊಂಡಿದ್ದಾರೆ.
