ಉದಯವಾಹಿನಿ , ಲಾಹೋರ್: ಕಡಲ ಗಡಿಗಳ ಪ್ರತಿಯೊಂದು ಇಂಚನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿರುವ ಪಾಕಿಸ್ತಾನದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ನವೀದ್ ಅಶ್ರಫ್ ಇದೀಗ ಭಾರತದ ಕಡಲ ಗಡಿ ಪ್ರದೇಶದಲ್ಲಿರುವ ವಿವಾದಿತ ಕ್ರೀಕ್ ಪ್ರದೇಶಗಳಲ್ಲಿನ ಪಾಕಿಸ್ತಾನದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ. ಇದು ವಿವಾದಾತ್ಮಕ ಪ್ರದೇಶವನ್ನು ಪಡೆಯಲು ಪಾಕಿಸ್ತಾನ ನಡೆಸುತ್ತಿರುವ ಸಂಚು. ಇದಕ್ಕಾಗಿ ಅವರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಿರುವ ಭಾರತ ಅಡ್ಮಿರಲ್ ಅವರ ಈ ನಡೆಯನ್ನು ಖಂಡಿಸಿದೆ. ಕರಾವಳಿ ಪ್ರದೇಶದಲ್ಲಿ ಪಾಕಿಸ್ತಾನ ತನ್ನ ನೌಕಾಪಡೆಯ ಕಾರ್ಯಾಚರಣೆಯನ್ನು ಹೆಚ್ಚಿಸಿಕೊಂಡಿದೆ ಹಾಗೂ ಗಣನೀಯ ಪ್ರಮಾಣದಲ್ಲಿ ನವೀಕರಣವನ್ನೂ ಮಾಡಿದೆ. ಅಡ್ಮಿರಲ್ ಅಶ್ರಫ್ ಭೇಟಿಯ ವೇಳೆ ಅಧಿಕೃತವಾಗಿ ಮೂರು ಅತ್ಯಾಧುನಿಕ 2400 ಟಿಡಿ ಹೋವರ್ಕ್ರಾಫ್ಟ್ಗಳನ್ನು ಪಾಕ್ ಮೆರೈನ್ಗಳಿಗೆ ಸೇರಿಸಿಲಾಯಿತು. ಈ ಹೋವರ್ಕ್ರಾಫ್ಟ್ಗಳನ್ನು ವಿವಿಧ ಸವಾಲಿನ ಭೂಪ್ರದೇಶಗಳಲ್ಲಿ ಏಕಕಾಲದಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಡ್ಮಿರಲ್ ಅಶ್ರಫ್, ಈ ಹೊಸ ಹೋವರ್ಕ್ರಾಫ್ಟ್ಗಳ ಸೇರ್ಪಡೆಯು ಪಾಕಿಸ್ತಾನ ನೌಕಾಪಡೆಯ ಶಕ್ತಿಯಾಗಿದೆ. ಇವು ದೇಶದ ಕಡಲ ಗಡಿಗಳು, ಕರಾವಳಿ ಪಟ್ಟಿ ವಿಶೇಷವಾಗಿ ಕ್ರೀಕ್ಸ್ ಪ್ರದೇಶದ ರಕ್ಷಣೆಯನ್ನು ಬಲಪಡಿಸುವಲ್ಲಿ ಅಚಲವಾದ ಸಂಕಲ್ಪವನ್ನು ಹೊಂದಿದೆ ಎಂದು ಅವರು ಹೇಳಿದರು.
ಸಮುದ್ರ ಸಂವಹನ ಮಾರ್ಗಗಳು ಮತ್ತು ಕಡಲ ಭದ್ರತೆಯು ಕೇವಲ ಮಿಲಿಟರಿ ಅವಶ್ಯಕತೆಯಲ್ಲ. ನಮ್ಮ ರಾಷ್ಟ್ರದ ಸಾರ್ವಭೌಮತ್ವದ ಮೂಲಾಧಾರ ಮತ್ತು ಆರ್ಥಿಕ ಸಮೃದ್ಧಿ ಮತ್ತು ಸ್ಥಿರತೆಯ ಪ್ರಮುಖ ಸ್ತಂಭ ಎಂದು ಅವರು ತಿಳಿಸಿದ್ದಾರೆ.
