ಉದಯವಾಹಿನಿ, ಚಿತ್ರದುರ್ಗ: ಜಲಾಶಯದ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನೋರ್ವ ಅದೃಷ್ಟವಶಾತ್ ಪಾರಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿವಿಲಾಸ ಜಲಾಶಯದ ಬಳಿ ನಡೆದಿದೆ.
ಒಂದೇ ವರ್ಷದಲ್ಲಿ ಸತತ ಎರಡನೇ ಬಾರಿಗೆ ಕೋಡಿ ಬಿದ್ದಿರುವ ಬರದನಾಡಿನ ಜೀವನಾಡಿ ವಿವಿಸಾಗರ ಜಲಾಶಯದ ಕೋಡಿನೀರು ವೀಕ್ಷಿಸಲು ನಿತ್ಯ ಸಾವಿರಾರು ಜನ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ಈ ವೇಳೆ ಯುವಕನೋರ್ವ ಹುಚ್ಚು ಸಾಹಸಕ್ಕೆ ಮುಂದಾಗಿದ್ದು, ಆಯತಪ್ಪಿ ಹರಿಯುವ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ. ಆದರೆ ಅಲ್ಲಿನ ಸಾರ್ವಜನಿಕರು ಹಾಗು ಪೊಲೀಸರ ಸಮಯಪ್ರಜ್ಞೆಯಿಂದ ಹಗ್ಗದ ಸಹಾಯದೊಂದಿಗೆ ಪ್ರಾಣಾಪಾಯದಿಂದ ಯುವಕ ಸೇಫಾಗಿ ದಡ ಸೇರಿದ್ದಾನೆ.
ಅಲ್ಲದೇ ವಿವಿಸಾಗರದ ಹಿನ್ನೀರಿನಲ್ಲಿ ಈಜಾಡದಂತೆ ಹಾಗೂ ನೀರಿಗೆ ಇಳಿಯದಂತೆ ಪೊಲೀಸರು ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಯುವಕರು ಈ ರೀತಿ ಹುಚ್ಚು ಸಾಹಸಕ್ಕೆ ಕೈ ಹಾಕಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಲು ಮುಂದಾಗಿರೋದು ಮಾತ್ರ ವಿಪರ್ಯಾಸ.
