ಉದಯವಾಹಿನಿ, ಚಿಕ್ಕಮಗಳೂರು: ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ಐವರು ಯುವಕರು ನಡು ರಸ್ತೆಯಲ್ಲಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ ಘಟನೆ ಕಡೂರಿನ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಭಾನುವಾರ ರಾತ್ರಿ ಬೆಳ್ಳಿ ಪ್ರಕಾಶ್ ಅಳಿಯ ಸಂದೇಶ್ ಬೆಂಗಳೂರಿನಿಂದ ಹಿಂದಿರುಗುವಾಗ ರಸ್ತೆಯಲ್ಲಿ ಸೈಡ್ ಬಿಡುವ ವಿಚಾರಕ್ಕೆ ಗಲಾಟೆ ನಡೆದಿದೆ, ಈ ವೇಳೆ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ಮಾಡಿದವರು ಕಡೂರು ಶಾಸಕ ಕೆ.ಎಸ್.ಆನಂದ್ ಅವರ ಸಂಬಂಧಿಗಳು ಎಂದು ಬಿಜೆಪಿಗರು ಆರೋಪಿಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಬೆಳ್ಳೆ ಪ್ರಕಾಶ್ 500 ಜನಕ್ಕಿಂತ ಹೆಚ್ಚಿನ ಕಾರ್ಯಕರ್ತರ ಜೊತೆ ಮಧ್ಯರಾತ್ರಿಯೇ ಪೊಲೀಸ್ ಠಾಣೆಯ ಮೂಮದೆ ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಸಂತೋಷ್ ಸೇರಿ ಐವರ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
