ಉದಯವಾಹಿನಿ, ಚಿತ್ರದುರ್ಗ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ’ಎಂದು ದಾರ್ಶನಿಕರೊಬ್ಬರು ಗುರುವಿನ ಮಹತ್ವವನ್ನು ಬಣ್ಣಿಸಿದ್ದಾರೆ. ಒಂದು ಮಗುವು ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಸಾಮಾಜಿಕ ಜೀವನದ ಪರಿಚಯವಾಗುತ್ತಾ ಹೋಗುತ್ತದೆ. ಆ ಹಂತದಲ್ಲಿ ಜೀವನದ ಅರ್ಥ, ಗುರಿ, ಜೀವನ ಮೌಲ್ಯಗಳನ್ನು ತಿಳಿಸಲು ಗುರುವಿನ ಮಾರ್ಗದರ್ಶನವೇ ಅಡಿಪಾಯ. ಎಂದು ಚಿತ್ರದುರ್ಗ ಕೋಟೆ ವಾಹಿವಿಹಾರಿಗಳ ಸಂಘದ ಅಧ್ಯಕ್ಷ ಆರ್. ಸತ್ಯಣ್ಣ ಅಭಿಪ್ರಾಯ ಪಟ್ಟಿದ್ದಾರೆ. ಅವರು ನಗರದ ಬ್ಯಾಂಕ್ ಕಾಲೋನಿ ನಾಗರಿಕರು ಇಂದು ಹಮ್ಮಿಕೊಂಡಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಭಾರತದಲ್ಲಿ ಹಿಂದೆಯಿದ್ದ ಗುರುಕುಲ ಪದ್ಧತಿ ಇಂದು ಮರೆಯಾಗುತ್ತಿರುವ ಸಮಯದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ನಡೆಸುತ್ತಿರುವ ಯೋಗ ತರಗತಿಗಳಲ್ಲಿ ಹೇಳಿಕೊಡುವ ಅಭ್ಯಾಸಗಳು ನಮ್ಮ ಭಾರತೀಯ ಪಾರಂಪರಿಕ ಗುರುಕುಲಗಳನ್ನು ಮರುಕಳಿಸುವಂತೆ ಮಾಡಿದೆ ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿ ಮಾತನಾಡಿದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಸಾಧಕಿ ಹಾಗೂ ಮದಕರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ಶಿಕ್ಷಕಿ ಶ್ರೀಮತಿ ನಾಗಲತಾ ಮಾತನಾಡಿ ” ಸಮಾಜ ಮತ್ತು ಪರಿಸರದೊಂದಿಗೆ ಸಾಮರಸ್ಯದಿಂದ ಬದುಕುವ ಸರಳ ಮಾರ್ಗವನ್ನು ಆಶ್ರಯಿಸಲು ಯೋಗ ಉತ್ತಮ ಮಾರ್ಗವಾಗಿದೆ.
ಪ್ರಕೃತಿ ಮತ್ತು ಯೋಗ ರೋಗದ ನಿರ್ವಹಣೆಗೆ ಸರಳವಾದ ಪ್ರಾಯೋಗಿಕ ವಿಧಾನವನ್ನು ಒದಗಿಸುತ್ತದೆ. ಯೋಗ ಅಭ್ಯಾಸ ಮಾಡುವವರು ಕೇವಲ ಯೋಗ ಸಾಧಕರಾಗದೆ ಯೋಗದಲ್ಲಿ ಸಾಧನೆ ಮಾಡಬೇಕು. ಅದಕ್ಕಾಗಿ ತಾವು ಕಲಿತ ವಿದ್ಯೆಯನ್ನು ಇತರರಿಗೂ ಕಲಿಯುವಂತೆ ಪ್ರೇರೇಪಿಸಿ ಸಮಾಜದ ಆರೋಗ್ಯ ಸುಧಾರಣೆಗೆ ಮುಂದಾಗಬೇಕು ಎಂದು ತಿಳಿಸಿದರು. ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಶ್ರೀಮತಿ ಅಂಬುಜಾಕ್ಷಿ ಹಾಗೂ ಬ್ಯಾಂಕ್ ಕಾಲೋನಿ ಭಜನಾ ಮಂಡಳಿಯ ಸದಸ್ಯರಿಂದ ಲಲಿತಾ ಸಹಸ್ರನಾಮ ಇತರ ದೇವರ ನಾಮಗಳನ್ನು ಹಾಡಿದರು. ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಹಿರಿಯ ಯೋಗ ಸಾಧಕಿಯಾದ ಶ್ರೀಮತಿ ವನಜಾಕ್ಷಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಯೋಗ ಪ್ರಚಾರಕ ರವಿ ಕೆ.ಅಂಬೇಕರ್, ಗೌರವಾಧ್ಯಕ್ಷ ಆರ್.ಸತ್ತಣ್ಣ, ಯೋಗ ಶಿಕ್ಷಕ ಎಂ.ಆರ್.ಮಂಜುನಾಥ್, ನಿರ್ದೇಶಕರಾದ ಮಲ್ಲಿಕಾರ್ಜುನ ಚಾರ್ ಇನ್ಜಿತರರಿಗೆ ಸನ್ಮಾನಿಸಲಾಯಿತು. ಬ್ಯಾಂಕ್ ಕಾಲೋನಿ ಶಾಖೆಯ ಹಲವು ಯೋಗ ಸಾಧಕಿಯರಾದ ರೇಣುಕಮ್ಮ, ನಿರ್ಮಲ, ಮಂಜುಳಾ ವಸಂತಲಕ್ಷ್ಮಿ ಮಾತನಾಡಿದರು ಸಂಸ್ಥೆಯ ಹಲವು ಯೋಗ ಸಾಧಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
