ಉದಯವಾಹಿನಿ, ತಿರುನೆಲ್ವೇಲಿ, ತಮಿಳುನಾಡು: ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿಯನ್ನು ಪುನರುಜ್ಜೀವನಗೊಳಿಸಲು ತಮಿಳುನಾಡು ಸರ್ಕಾರ ಮಹಿಳೆಯರ ಮೂಲಕ ಹೊಸ ಉಪಕ್ರಮವೊಂದನ್ನು ಪ್ರಾರಂಭಿಸಿದೆ.
ಕೃಷಿಯು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿದೆ. ಅಷ್ಟೇ ಅಲ್ಲ ಅದು ಮೂಲ ಭಾರತದ ಪರಂಪರೆಯೂ ಹೌದು. ಕೃಷಿ ಶತಮಾನಗಳಿಂದ ಮಾನವ ನಾಗರಿಕತೆಯ ಅತ್ಯಗತ್ಯ ಭಾಗವೂ ಆಗಿ ಮುಂದುವರೆದುಕೊಂಡು ಬರುತ್ತಿದೆ. ರೈತರು ದೇಶದ ಜೀವಗಳನ್ನು ಬದುಕಿಸಲು ಆ ಮೂಲಕ ಬದುಕನ್ನು ಪೋಷಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ನಾವು ತಿನ್ನುವ ಅಕ್ಕಿಯನ್ನು ಅಂಗಡಿಯಿಂದ ಸುಲಭವಾದ ಬೆಲೆಗೆ ಖರೀದಿಸುತ್ತೇವೆ. ಆದರೆ, ರೈತರು ಬಿಸಲು ಮಳೆಯನ್ನು ಲೆಕ್ಕಿಸದೇ ಅದನ್ನು ಉತ್ಪಾದಿಸಲು ಶ್ರಮಿಸುತ್ತಾರೆ ಎಂದರೆ ಅತಿಶಯೋಕ್ತಿ ಇಲ್ಲ ಬಿಡಿ. ಭತ್ತದಿಂದ ಅಕ್ಕಿ ಬರುತ್ತದೆ… ಅನೇಕರು ಅಕ್ಕಿ ಒಂದೇ ಎಂದು ಭಾವಿಸುತ್ತಾರೆ. ಆದರೆ ಇಂದಿನ ಪೀಳಿಗೆ ಅನೇಕ ಜನರಿಗೆ ನೂರಾರು ವಿಧದ ಅಕ್ಕಿಗಳಿವೆ ಎಂದು ತಿಳಿದಿರುವ ಸಾಧ್ಯತೆಗಳು ಕಡಿಮೆಯೇ ಎನ್ನಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಸಾಂಪ್ರದಾಯಿಕ ಭತ್ತದ ಪ್ರಭೇದಗಳು ಇದ್ದವು ಎಂದು ಹೇಳಲಾಗುತ್ತದೆ. ರಾಸಾಯನಿಕ ಗೊಬ್ಬರಗಳ ಆಗಮನದಿಂದಾಗಿ ಅವು ಕಾಲಾನಂತರದಲ್ಲಿ ಕಣ್ಮರೆಯಾಗಿವೆ ಮತ್ತು ಪ್ರಸ್ತುತ ಕೇವಲ 180 ವಿಧದ ಸಾಂಪ್ರದಾಯಿಕ ಭತ್ತದ ಪ್ರಭೇದಗಳು ಮಾತ್ರ ಬಳಕೆಯಲ್ಲಿವೆ.
ರೈತರು ಈ ಸಾಂಪ್ರದಾಯಿಕ ಭತ್ತದ ಪ್ರಭೇದಗಳನ್ನು ಉಳಿಸಿ ಬೆಳೆಸುವಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿಲ್ಲ. ಇದಕ್ಕೆ ಮುಖ್ಯ ಕಾರಣ ಎಂದರೆ ಅವರಿಗೆ ಸಾಕಷ್ಟು ಇಳುವರಿ ಸಿಗುವುದಿಲ್ಲ. ಏಕೆಂದರೆ, ಸಾಂಪ್ರದಾಯಿಕ ಭತ್ತದ ತಳಿಗಳನ್ನು ಬೆಳೆಸುವುದು ನಾವು ಭಾವಿಸುವಷ್ಟು ಸುಲಭವಲ್ಲ. ಅದಕ್ಕೆ ನೈಸರ್ಗಿಕ ಗೊಬ್ಬರಗಳನ್ನು ಮಾತ್ರ ಬಳಸಬೇಕು. ಮೊದಲ ಮೂರು ವರ್ಷಗಳಲ್ಲಿ ನಿರೀಕ್ಷಿತ ಇಳುವರಿ ಸಿಗದಿರಬಹುದು ಮತ್ತು ನಷ್ಟವಾಗುವ ಸಾಧ್ಯತೆಯೂ ಇದೆ. ಇಂತಹ ಅನೇಕ ಕಷ್ಟಗಳಿಂದಾಗಿ ಅನೇಕ ರೈತರು ಸಾಂಪ್ರದಾಯಿಕ ಭತ್ತದ ತಳಿಗಳನ್ನು ಬೆಳೆಸಲು ಇಚ್ಚಿಸುವುದಿಲ್ಲ.
