ಉದಯವಾಹಿನಿ, ರಾಯಚೂರು: ಮನೆ, ಮೀಟರ್ ಇಲ್ಲದಿದ್ದರೂ ಕೂಡ ಜೆಸ್ಕಾಂ ಸಿಬ್ಬಂದಿ 10 ಸಾವಿರ ರೂ. ಕರೆಂಟ್ ಬಿಲ್ ನೀಡಿದ್ದು, ಕುಟುಂಬಸ್ಥರು ಶಾಕ್ ಆಗಿದ್ದಾರೆ. ಈ ಘಟನೆ ರಾಯಚೂರಿನ ಕಡಗಂದೊಡ್ಡಿಯಲ್ಲಿ ನಡೆದಿದೆ. ರಾಯಚೂರು ತಾಲೂಕಿನ ಕಡಗಂದೊಡ್ಡಿ ಗ್ರಾಮದಲ್ಲಿ ಜೆಸ್ಕಾಂನಿಂದ ಅಚಾತುರ್ಯ ನಡೆದಿದೆ. ಕಡಗಂದೊಡ್ಡಿ ಗ್ರಾಮದ ಭಾಗ್ಯಮ್ಮ ಹೆಸರಿಗೆ 10,105 ರೂ. ಕರೆಂಟ್ ಬಿಲ್ ಬಂದಿದೆ. ಪ್ರಸ್ತುತ ಬಿಲ್ 250 ರೂ. ಹಾಗೂ ಬಾಕಿ 9,855 ರೂ. ಸೇರಿಸಿ ಒಟ್ಟು ಬಿಲ್ ನೀಡಿದ್ದಾರೆ.
ಇದಕ್ಕೆ ಭಾಗ್ಯಮ್ಮ ಅವರು ಮನೆ ಹಾಗೂ ಮೀಟರ್ ತೋರಿಸಿ, ನಾವು ಈಗಿರುವ ಮನೆಯ ಕರೆಂಟ್ ಬಿಲ್ ಕಟ್ಟುತ್ತಿದ್ದು, ಇದರ ಹೊರತಾಗಿ ನನ್ನ ಹೆಸರಲ್ಲಿ ಮನೆಯೂ ಇಲ್ಲ, ಮೀಟರ್ ಕೂಡ ಇಲ್ಲ, ಆದರೂ ಬಿಲ್ ನೀಡಿದ್ದೀರಿ. ಬಿಲ್ ವಾಪಸ್ ಪಡೆಯದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆದರೆ ಜೆಸ್ಕಾಂ ಅಧಿಕಾರಿಗಳು ಬಿಲ್ ಕಟ್ಟಿ ನಂತರ ಆರ್‌ಆರ್ ಸಂಖ್ಯೆ ಮುಕ್ತಾಯ ಮಾಡುವುದಾಗಿ ತಿಳಿಸಿದ್ದಾರೆ. 2013ರಲ್ಲಿ ಭಾಗ್ಯಮ್ಮ ಹೆಸರಲ್ಲಿ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ತಿಂಗಳಿಗೆ 250 ರೂ. ಬಿಲ್ ಪಾವತಿಸಬೇಕು ಅಂತ ಜೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಿದ್ಯುತ್ ಸಂಪರ್ಕ ಪಡೆಯಲು ಮನೆ ಎಲ್ಲಿದೆ, ಇಷ್ಟು ದಿನ ಯಾಕೆ ಬಿಲ್ ಕೊಟ್ಟಿಲ್ಲ ಅಂತ ಭಾಗ್ಯಮ್ಮ ಕುಟುಂಬಸ್ಥರು ಜೆಸ್ಕಾಂ ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಪರಿಶೀಲಿಸುವುದಾಗಿ ತಿಳಿಸಿ ಹಾರಿಕೆ ಉತ್ತರ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!