ಉದಯವಾಹಿನಿ, ಬೆಂಗಳೂರು: ತಮಿಳುನಾಡಿನಲ್ಲಿ ಕೆಎಂಎಫ್ನ ನಂದಿನಿ ತುಪ್ಪದ ಹೆಸರಿನಲ್ಲಿ ಕಲಬೆರಕೆ ತುಪ್ಪ ತಯಾರಿಸಿ ಮಾರಾಟ ಮಾಡುವ ದೊಡ್ಡ ಜಾಲವನ್ನು ಕೇಂದ್ರ ಅಪರಾಧ ಶಾಖೆ ಅಧಿಕಾರಿಗಳು ಮತ್ತು ಕೆಎಂಎಫ್ವಿಜಿಲೆನ್ಸ್ ವಿಂಗ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಯಲು ಮಾಡಲಾಗಿದೆ. ಕೆಎಂಎಫ್ ವಿತರಕ, ಅವರ ಮಗ ಮತ್ತು ಇತರ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಜಾಲ ನಂದಿನಿ ತುಪ್ಪವನ್ನು ಕೃತಕ ತುಪ್ಪದೊಂದಿಗೆ ಕಲಬೆರಕೆ ಮಾಡಿ ಗೋಲ್ಮಾಲ್ ನಡೆಸುತ್ತಿತ್ತು.
1.26 ಕೋಟಿ ರೂಪಾಯಿ ಮೌಲ್ಯದ 8,136 ಲೀಟರ್ ಕಲಬೆರಕೆ ತುಪ್ಪ ಪೂರೈಸಲು ಬಳಸಿದ ನಾಲ್ಕು ವಾಹನಗಳು, ತುಪ್ಪ ತಯಾರಿಸಲು ಯಂತ್ರೋಪಕರಣಗಳು ಮತ್ತು ತುಪ್ಪವನ್ನು ಕಲಬೆರಕೆ ಮಾಡಲು ಬಳಸಲಾದ ದೊಡ್ಡ ಪ್ರಮಾಣದ ತೆಂಗಿನಕಾಯಿ ಮತ್ತು ತಾಳೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಒಂದು ಲೀಟರ್ ಮೂಲ ತುಪ್ಪದಿಂದ ಮೂರು ಲೀಟರ್ ಕಲಬೆರಕೆ ತುಪ್ಪವನ್ನು ಉತ್ಪಾದಿಸುತ್ತಿದ್ದರು.
ಬೆಂಗಳೂರಿನ ಅಧಿಕೃತ ಕೆಎಂಎಫ್ ಪರವಾನಗಿಗಳನ್ನು ಹೊಂದಿರುವ ವ್ಯಾಪಾರಿಗೆ ತುಪ್ಪವನ್ನು ಸರಬರಾಜು ಮಾಡಲಾಗಿತ್ತು. ನಂತರ ಅವರು ಮತ್ತು ಅವರ ಕುಟುಂಬು ಕಲಬೆರಕೆ ತುಪ್ಪವನ್ನು ನಗರದಾದ್ಯಂತ ವಿವಿಧ ಸಗಟು ಮತ್ತು ಚಿಲ್ಲರೆ ಅಂಗಡಿಗಳು ಮತ್ತು ನಂದಿನಿ ಪಾರ್ಲರ್ಗಳಿಗೆ ವಿತರಿಸಿ, ಅದನ್ನು ನಿಜವಾದ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ, ಆರೋಪಿಗಳಲ್ಲಿ ಒಬ್ಬರು ಕೆಎಂಎಫ್ ಡೀಲರ್ ಆಗಿದ್ದಾರೆ ಎಂದರು.
