
ಉದಯವಾಹಿನಿ, ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವನಸಮುದ್ರದ ಬಳಿಯ ನಾಲೆಗೆ ಎರಡು ದಿನಗಳ ಹಿಂದೆ ಬಿದ್ದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಮೇಲಕ್ಕೆತ್ತಿದೆ. ಕಳೆದ ಎರಡು ದಿನಗಳ ಹಿಂದೆ ಶಿವನಸಮುದ್ರ ಬಳಿಯ ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ಆನೆ ಓಡಾಡುವುದನ್ನು ಅಲ್ಲಿನ ಅಧಿಕಾರಿಗಳು ಗಮನಿಸಿದ್ದರು. ಖಾಸಗಿ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಪೂರೈಸುವ ಸುಮಾರು 20 ಅಡಿ ಆಳದ ಕೆನಲ್ ಗೇಟ್ ಮೂಲಕ ಕಾಡಾನೆ ನಾಲೆಗೆ ಇಳಿದಿದೆ. ಆದರೆ ನೀರಿನ ಹರಿವಿನ ರಭಸ ಹೆಚ್ಚಾಗಿದ್ದರಿಂದ ಮತ್ತೆ ಮರಳಿ ವಾಪಸ್ ಬರಲು ಸಾಧ್ಯವಾಗದೇ ಒದ್ದಾಟ ನಡೆಸಿತ್ತು. ಜೊತೆಗೆ ಸತತವಾಗಿ ನೀರಿನಲ್ಲಿದ್ದ ಕಾರಣ ಆನೆ ಸೊಂಡಿಲಿನ ತುದಿ ಹಾಗೂ ಕಾಲು ಬಿಳಿ ಬಣ್ಣಕ್ಕೆ ತಿರುಗಿತ್ತು.
ಭಾನುವಾರ ಆನೆ ಕಾಣದಿರುವುದನ್ನು ಗಮನಿಸಿದ ಅಧಿಕಾರಿಗಳಿಗೆ ಆನೆ ನಾಲೆಗೆ ಇಳಿದಿರುವ ವಿಷಯ ಗೊತ್ತಾಗಿದೆ. ಬಳಿಕ ಸಂಜೆವರೆಗೆ ಆನೆ ಮೇಲೆ ಬರುತ್ತದೆ ಎಂದು ಕಾದು ನೋಡಿದರೂ ಕೂಡ ಆನೆ ಮೇಲೆ ಬಂದಿರಲಿಲ್ಲ. ಈ ಹಿನ್ನೆಲೆ ಡಿಸಿಎಫ್ ರಘು ಹಾಗೂ ವನ್ಯಜೀವಿ ವಲಯ ಮೈಸೂರು ವಿಭಾಗ ಡಿಸಿಎಫ್ ಪ್ರಭು ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳು ನಾಲೆಯ ನೀರಿನ ಪ್ರಮಾಣವನ್ನು ತಗ್ಗಿಸಿ ಕಾರ್ಯಾಚರಣೆ ಆರಂಭಿಸಿದರು.
