ಉದಯವಾಹಿನಿ, ಗುವಾಹಟಿ: ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಸಂಕಷ್ಟದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ ಸೆನುರನ್ ಮುತ್ತುಸ್ವಾಮಿ (109) ಮತ್ತು ಮಾರ್ಕೊ ಜಾನ್ಸೆನ್ (93) ಅವರ ಕೆಳ ಕ್ರಮಾಂಕದ ಪ್ರತಿರೋಧದ ಪರಿಣಾಮವಾಗಿ 489 ರನ್ಗಳ ಬೃಹತ್ ಸ್ಕೋರ್ ಗಳಿಸಿದೆ. ಗುರಿ ಬೆನ್ನಟ್ಟುತ್ತಿರುವ ಭಾರತ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿ ಇನ್ನೂ 480 ರನ್ ಹಿನ್ನಡೆಯಲ್ಲಿದೆ.
6 ರನ್ಗೆ 247 ರನ್ ಗಳಿಸಿದ್ದಲ್ಲಿಂದ ಭಾನುವಾರ ದ್ವಿತೀಯ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾಗೆ ಸೆನುರಾನ್ ಮುತ್ತುಸ್ವಾಮಿ ಮತ್ತು ಕೈಲ್ ವರೈನ್ ಉತ್ತಮ ಜತೆಯಾಟ ನಡೆಸುವ ಮೂಲಕ ತಂಡಕ್ಕೆ ನೆರವಾದದರು. ಆ ಬಳಿಕ ವೇಗಿ ಮಾರ್ಕೊ ಜಾನ್ಸೆನ್ ಬಾರಿಸಿದ ಆಕರ್ಷಕ ಅರ್ಧಶತಕ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಭಾರತದ ಎಲ್ಲಾ ಯೋಜನೆಗಳು ವಿಫಲವಾಯಿತು.
25 ರನ್ಗಳಿಸಿದ್ದ ಭಾರತೀಯ ಮೂಲದ ಮುತ್ತುಸ್ವಾಮಿ ಶತಕ ಬಾರಿಸುವ ಮೂಲಕ ಭಾರತಕ್ಕೆ ಕಂಟಕವಾದರು. ಸ್ಪಿನ್, ವೇಗದ ಬೌಲಿಂಗ್ಗೆ ತಾಳ್ಮೆಯುತ ಬ್ಯಾಟ್ ಬೀಸಿದ ಮುತ್ತುಸ್ವಾಮಿ 206 ಎಸೆತಗಳಿಂದ 109(10 ಬೌಂಡರಿ, 2 ಸಿಕ್ಸರ್) ರನ್ ಬಾರಿಸಿದರು. ಇದು ಅವರ ಚೊಚ್ಚಲ ಶತಕವಾಗಿದೆ. ಕೈಲ್ ವರೈನ್ 45 ರನ್ ಗಳಿಸಿದರು. ಈ ಜೋಡಿ 7ನೇ ವಿಕೆಟ್ಗೆ 88 ರನ್ ಜತೆಯಾಟ ನಡೆಸಿದರು.
ಶತಕ ತಪ್ಪಿಸಿಕೊಂಡ ಜಾನ್ಸೆನ್ : ಕೈಲ್ ವರೈನ್ ವಿಕೆಟ್ ಪತನದ ಬಳಿಕ ಆಡಲಿಳಿದ ವೇಗಿ ಮಾರ್ಕೊ ಜಾನ್ಸೆನ್ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ಮಿಂಚಿದರು. ನಿರೀಕ್ಷೆಯ ಮಾಡದಂತೆ 8ನೇ ವಿಕೆಟ್ಗೆ ಮುತ್ತುಸ್ವಾಮಿ ಜತೆ ಸೇರಿಕೊಂಡು 97ರನ್ಗಳ ಜತೆಯಾಟ ನಡೆಸಿದರು. ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿ ಜಾನ್ಸೆನ್ ಬರೋಬ್ಬರಿ 7 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಸಿ 93 ರನ್ ಗಳಿಸಿ 7 ರನ್ ಅಂತರದಲ್ಲಿ ಶತಕ ವಂಚಿತರಾದರು. ಕುಲ್ದೀಪ್ ಯಾದವ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಅವರನ್ನು ಪೆವಿಲಿಯನ್ಗೆ ಅಟ್ಟಿದರು.
