ಉದಯವಾಹಿನಿ, ರಾಯಚೂರು: ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಕಂಬಕ್ಕೆ ಕಟ್ಟಿ ಹಾಕಿ ಒದೆಯುವುದಾಗಿ ಕೆ.ಆರ್.ಐಡಿಎಲ್ ಅಧಿಕಾರಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಎಚ್ಚರಿಕೆ ನೀಡಿದ್ದಾರೆ. ರಾಯಚೂರಿನ ಸಿರವಾರ ತಾಲೂಕಿನ ಮರಾಟ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಿರವಾರ ರಸ್ತೆಯ ಕಾಮಗಾರಿ ಆರಂಭ, ಶಾಲಾ ಕಟ್ಟಡ ನಿರ್ಮಾಣ ಕಾರ್ಯ ಬಾಕಿ ಹಿನ್ನೆಲೆ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಎಇಇ ಅನ್ನೋದನ್ನೂ ನೋಡದೆ ನಾಲಿಗೆ ಹರಿಬಿಟ್ಟು ಒದೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಚಿವರು ಕೆ.ಆರ್.ಐ.ಡಿ.ಎಲ್ ಎಇಇ ಹನುಮಂತಪ್ಪಗೆ ಮನಸೋ ಇಚ್ಚೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾಮಗಾರಿ ಪೂಜೆ ಮಾಡಿ ಎಷ್ಟು ದಿನವಾಯ್ತು ರಸ್ತೆ ಕಾಮಗಾರಿ ಆರಂಭಿಸದೆ ಕತ್ತೆಕಾಯುತ್ತಿದ್ದಿರಾ…? ಜನರಿಗೆ ತೊಂದರೆಯಾಗುತ್ತಿದೆ. ಜನರಿಂದ ಸರ್ಕಾರಕ್ಕೆ ಬಯ್ಯಿಸುವ ಕೆಲಸ ಮಾಡುತ್ತಿದ್ದೀರಾ…? ಕೂಡಲೇ ಆರಂಭಿಸದಿದ್ದರೆ ಅಮಾನತ್ತು ಮಾತ್ರವಲ್ಲ, ಕಟ್ಟಿ ಹಾಕಿ ಒದಿಯುತ್ತೇನೆ ಎಂದಿದ್ದಾರೆ.
