ಉದಯವಾಹಿನಿ, ಹರೆತ್ ಹ್ರೈಕ್ (ಲೆಬನಾನ್): ಕದನ ವಿರಾಮ ಘೋಷಣೆಯ ಹಲವು ತಿಂಗಳ ಬಳಿಕ ಲೆಬನಾನ್ ರಾಜಧಾನಿಯ ಮೇಲೆ ಇಸ್ರೇಲ್​ ವಾಯುದಾಳಿ ನಡೆಸಿದ್ದು, ಹಿಜ್ಬುಲ್ಲಾ ಮುಖ್ಯಸ್ಥ ಹೈಥಮ್ ತಬ್ತಬಾಯಿಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದೆ. ಕಳೆದ ಜೂನ್​ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್​ ದಾಳಿ ಮಾಡಿದೆ. ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ನಡೆದ ಈ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಹೇಳಿದೆ.ತಬ್ತಬಾಯಿ ಸಾವನ್ನು ಹಿಜ್ಬುಲ್ಲಾ ಕೂಡ ದೃಢಪಡಿಸಿದೆ. ಇಸ್ರೇಲ್-ಹಿಜ್ಬುಲ್ಲಾ ಯುದ್ಧದಲ್ಲಿ ಕದನ ವಿರಾಮದ ಸುಮಾರು ಒಂದು ವರ್ಷದ ನಂತರ ಈ ದಾಳಿ ನಡೆದಿದೆ. ಪೋಪ್ ಲಿಯೋ XIV ಅವರು ಲೆಬನಾನ್​ಗೆ ತಮ್ಮ ಮೊದಲ ವಿದೇಶ ಪ್ರವಾಸ ಕೈಗೊಳ್ಳುವ ಮುನ್ನವೇ ಈ ಬೆಳವಣಿಗೆ ಕಂಡುಬಂದಿದೆ.ಉತ್ತರ ಮತ್ತು ದಕ್ಷಿಣ ಇಸ್ರೇಲ್ ಮೇಲೆ ಯಾವುದೇ ಬೆದರಿಕೆ ತಡೆಯಲು ನಾವು ಇಂತಹ ಬಲವಂತದ ಕ್ರಮವನ್ನು ಮುಂದುವರೆಸುತ್ತೇವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಅಲ್ಲದೆ, ಲೆಬನಾನ್​​ನ ಗಡಿಯ ಬಳಿ ಉತ್ತರ ಇಸ್ರೇಲ್‌ನಲ್ಲಿರುವ ನಿವಾಸಿಗಳಿಗೆ ದೈನಂದಿನ ದಿನಚರಿಗಳನ್ನು ಮುಂದುವರೆಸಲು ಮಿಲಿಟರಿ ಸೂಚನೆ ನೀಡಿದೆ.ಇಸ್ರೇಲ್ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಮರುಯೋಜಿಸಲು ಮುಂದಾಗಿದ್ದು, ದಕ್ಷಿಣ ಭಾಗದಲ್ಲಿ ಸೈನ್ಯವನ್ನು ನಿಯೋಜಿಸಿದೆ. ಹಿಜ್ಬುಲ್ಲಾ ನಿಶ್ಯಸ್ತ್ರೀಕರಣವನ್ನು ಬೆಂಬಲಿಸುವ ಲೆಬನಾನ್ ಸರ್ಕಾರವು ಆ ಹಕ್ಕುಗಳನ್ನು ನಿರಾಕರಿಸಿದೆ.
ಕದನ ವಿರಾಮ ಆರಂಭವಾದಾಗಿನಿಂದ ಹಿಜ್ಬುಲ್ಲಾ ಇಸ್ರೇಲ್ ಮೇಲೆ ದಾಳಿ ಮಾಡಿಲ್ಲ. ಡಿಸೆಂಬರ್‌ನಲ್ಲಿ ಇಸ್ರೇಲಿ ಮಿಲಿಟರಿ ನೆಲೆಯ ಬಳಿಯ ಎರಡು ರಾಕೆಟ್‌ಗಳನ್ನು ಹಾರಿಸಿ, ಅದನ್ನು ಎಚ್ಚರಿಕೆ ಎಂದು ಹೇಳಿತ್ತು.
ತಬ್ತಬಾಯಿ ಇಬ್ರಾಹಿಂ ಅಕಿಲ್ ಅವರ ಉತ್ತರಾಧಿಕಾರಿ ಎಂದೇ ಪರಿಗಣಿಸಲಾಗಿತ್ತು. ಇದಕ್ಕೂ ಮುನ್ನ, ಇಬ್ರಾಹಿಂ ಅಕಿಲ್​ 2024ರ ಸೆಪ್ಟೆಂಬರ್​ನಲ್ಲಿ ಇಸ್ರೇಲಿ ದಾಳಿಯಲ್ಲಿ ಹತ್ಯೆಯಾಗಿದ್ದ. ಇದರೊಂದಿಗೆ ದೀರ್ಘಕಾಲದ ನಾಯಕ ಹಸನ್ ನಸ್ರಲ್ಲಾ ಸೇರಿದಂತೆ ಹಿಜ್ಬುಲ್ಲಾದ ಹಿರಿಯ ನಾಯಕತ್ವವು ಕೊನೆಗೊಂಡಿತ್ತು.

ತಬ್ತಬಾಯಿ ಹಿಜ್ಬುಲ್ಲಾದ ಗಣ್ಯ ರಾಡ್ವಾನ್ ಘಟಕದ ನೇತೃತ್ವವನ್ನೂ ವಹಿಸಿದ್ದು, 2016ರಲ್ಲಿ ಅಮೆರಿಕ ಈತನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಸಿರಿಯಾ ಮತ್ತು ಯೆಮೆನ್‌ನಲ್ಲಿ ಹಿಜ್ಬುಲ್ಲಾದ ವಿಶೇಷ ಪಡೆಗಳನ್ನು ಮುನ್ನಡೆಸಿದ ಮಿಲಿಟರಿ ನಾಯಕನಾಗಿದ್ದ. ಈತನ ಕುರಿತು ಮಾಹಿತಿ ನೀಡುವವರಿಗೆ 5 ಮಿಲಿಯನ್ ಡಾಲರ್‌ಗಳವರೆಗೆ ನೀಡುವುದಾಗಿ ಬಹುಮಾನ ಘೋಷಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!