ಉದಯವಾಹಿನಿ, ರಾಮನಗರ: ಮಾಜಿ ಸಂಸದ ಪ್ರತಾಪ್ ಸಿಂಹ , ಶಾಸಕ ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಎಸ್ಡಿಪಿಐ ಮುಖಂಡನ ಮೇಲೆ ರಾಮನಗರ ಟೌನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನ.23ರಂದು ಎಸ್ಡಿಪಿಐ ವತಿಯಿಂದ ನಡೆದಿದ್ದ ರಾಜ್ಯೋತ್ಸವ ಕಾರ್ಯಕ್ರದಲ್ಲಿ ಎಸ್ಡಿಪಿಐ ರಾಜ್ಯ ಸಂಚಾಲಕ ಮೌಲಾನಾ ನೂರುದ್ದೀನ್, ಪ್ರತಾಪ್ ಸಿಂಹ ಹಾಗೂ ಯತ್ನಾಳ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿ ವಿವಾದಾತ್ಮಕ ಭಾಷಣ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರ್ಎಸ್ಎಸ್ ಹಾಗೂ ಹಿಂದೂ ಮುಖಂಡರ ಬಗ್ಗೆ ಅವಹೇಳನ ಮಾಡಿರೋ ಆರೋಪದಡಿ ಬಿಜೆಪಿ ಕಾರ್ಯಕರ್ತ ಸಿದ್ದರಾಜು ಎಂಬವರು ಈ ಬಗ್ಗೆ ರಾಮನಗರ ಟೌನ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಎಸ್ಡಿಪಿಐ ಸಂಚಾಲಕ ಮೌಲಾನಾ ನೂರುದ್ದೀನ್, ಜಿಲ್ಲಾಧ್ಯಕ್ಷ ಅಮ್ಜದ್ ಷರೀಫ್, ತಾಲೂಕು ಅಧ್ಯಕ್ಷ ಸುಲ್ತಾನ್ ಅಲಿಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
