ಉದಯವಾಹಿನಿ, ಕಾರವಾರ: ಶಾರ್ಟ್ ಸರ್ಕ್ಯೂಟ್ನಿಂದ ಪೀಠೋಪಕರಣ ಮಳಿಗೆಗೆ ಬೆಂಕಿ ಹೊತ್ತಿದ ಪರಿಣಾಮ ಅಪಾರ ಪ್ರಮಾಣದ ಬೆಲೆಬಾಳುವ ಕಟ್ಟಿಗೆ ತುಂಡು, ಪೀಠೋಪಕರಣ ಹಾಗೂ ಕಾರು ಬೆಂಕಿಗಾಹುತಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಕಿಲ್ಲೆ ಓಣಿಯ ಖಾದರ್ಲಿಂಕ್ ಬಳಿ ನಡೆದಿದೆ. ಮುಂಜಾನೆ ಹೊತ್ತಿದ ಬೆಂಕಿ ಅಕ್ಕ ಪಕ್ಕದ ಮಳಿಗೆಗಳಿಗೂ ಆವರಿಸಿದ್ದು, ಅಂದಾಜು ಐವತ್ತು ಲಕ್ಷದಷ್ಟು ಮೌಲ್ಯದ ವಸ್ತುಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಕಿಲ್ಲೆ ಓಣಿಯ ಯೂನುಸ್ ಹೊಸಕೊಪ್ಪ ಎಂಬವರಿಗೆ ಸೇರಿದ ಪೀಠೋಪಕರಣದ ಮಳಿಗೆ ಹಾಗೂ ಅಯಾನ್ ಹಾನಗಲ್ ಎಂಬವರಿಗೆ ಸೇರಿದ ಹಾರ್ಡ್ವೇರ್ ಮಳಿಗೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ತಗುಲಿ ಹಾನಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ಮುಂಡಗೋಡು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
