
ಉದಯವಾಹಿನಿ , ತಿರುವನಂತಪುರಂ: ಸಮಾಜದಲ್ಲಿ ನನ್ನ ಕೆರಿಯರ್ ಹಾಗೂ ಜೀವನ ನಾಶಮಾಡಲೆಂದೇ ನನ್ನ ವಿರುದ್ಧ ಸಂಚು ರೂಪಿಸಲಾಗಿತ್ತು ಎಂದು ನಟ ದಿಲೀಪ್ ಹೇಳಿದ್ದಾರೆ. ಬಹುಭಾಷಾ ನಟಿಯ ಕಿಡ್ನಾಪ್ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಖಲಾಸೆಗೊಂಡ ಬಳಿಕ ಪ್ರತಿಕ್ರಿಯಿಸಿದ ಅವರು, ಈ ಕೇಸಲ್ಲಿ ಕ್ರಿಮಿನಲ್ ಗೂಢಾಲೋಚನೆಯಿದೆ, ಇದನ್ನು ತನಿಖೆ ಮಾಡಬೇಕು ಎಂದು ಮಂಜು ವಾರಿಯರ್ ಹೇಳಿದ ಹೇಳಿಕದ ಬಳಿಕ ನನ್ನ ವಿರುದ್ಧ ಸಂಚು ಶುರುವಾಯಿತು ಎಂದು ಹೇಳಿದರು.
ಅಂದು ಇದ್ದ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಪೊಲೀಸರು ಸೇರಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದರು. ಇದಕ್ಕಾಗಿ ಪ್ರಮುಖ ಆರೋಪಿಯನ್ನೂ, ಸಹ ಆರೋಪಿಗಳನ್ನೂ ಪೊಲೀಸರು ಹಿಡಿದರು. ಪೊಲೀಸರು ಕೆಲ ಮಾಧ್ಯಮಗಳ ಜೊತೆ ಸೇರಿ ಸುಳ್ಳು ಕತೆ ಸೃಷ್ಟಿಸಿದರು ಎಂದು ದೂರಿದರು. ಆ ಕತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿದರು. ಪೊಲೀಸರ ಕಟ್ಟುಕತೆ ಬಯಲಾಗಿದೆ. ನನ್ನನ್ನು ಈ ಕೇಸಲ್ಲಿ ಆರೋಪಿಯಾಗಿಸಿದ್ದೇ ನಿಜವಾದ ಸಂಚು. ಸಮಾಜದಲ್ಲಿ ನನ್ನ ಕೆರಿಯರ್ ಹಾಗೂ ಜೀವನ ನಾಶಮಾಡಲೆಂದೇ ಹೀಗೆ ಮಾಡಿದರು. ಜೊತೆಯಾಗಿ ನಿಂತ ಸ್ನೇಹಿತರಿಗೆ, ಕುಟುಂಬ ಸದಸ್ಯರಿಗೆ, ನನಗಾಗಿ ಪ್ರಾರ್ಥಿಸಿದವರಿಗೆ ಧನ್ಯವಾದ. ವಕೀಲ ರಾಮನ್ ಪಿಳ್ಳೈ ಗೂ ಧನ್ಯವಾದ ಎಂದು ತಿಳಿಸಿದರು.
ನಟಿ ಮಂಜು ವಾರಿಯರ್ ಮತ್ತು ದಿಲೀಪ್ ಪ್ರೀತಿಸಿ 1998 ರಲ್ಲಿ ಮದುವೆಯಾಗಿದ್ದರು. 2015 ಜನವರಿಯಲ್ಲಿ ದಂಪತಿ ವಿಚ್ಛೇದನ ಪಡೆದಿದ್ದರು.
