ಉದಯವಾಹಿನಿ, ಶಿವಮೊಗ್ಗ: ನಗರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬಿಜೆಪಿ ಕಚೇರಿ ಮುತ್ತಿಗೆ ಪ್ರತಿಭಟನೆಯ ವೇಳೆ ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು 60 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸುವಲ್ಲಿ ಪೊಲೀಸರು ನಿರತರಾಗಿದ್ದ ಸಂದರ್ಭದಲ್ಲಿ ಈ ಕಳ್ಳತನ ನಡೆದಿದೆ. ಎಎಸ್ಐ ಅಮೃತಾಬಾಯಿ ಅವರು ಇತ್ತೀಚೆಗಷ್ಟೇ ಹೊಸ ಮಾಂಗಲ್ಯ ಸರವನ್ನು ಮಾಡಿಸಿದ್ದರು ಎನ್ನಲಾಗಿದೆ. ಪ್ರತಿಭಟನೆಯ ತಳ್ಳಾಟ-ನೂಕಾಟದ ವೇಳೆ ಕಳ್ಳರು ಸರವನ್ನು ಎಗರಿಸಿದ್ದಾರೆ. ಮಾಂಗಲ್ಯ ಸರವನ್ನು ಕಳೆದುಕೊಂಡ ಎಎಸ್ಐ ಅಮೃತಾಬಾಯಿ ಕಣ್ಣೀರಿಟ್ಟಿದ್ದಾರೆ.
ನರೇಗಾ ಹೆಸರು ಬದಲಾವಣೆ, ಇಡಿ ದುರ್ಬಳಕೆಯಾಗುತ್ತಿದೆ ಎಂದು ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದರು. ಈ ವೇಳೆ ಎಎಸ್ಐ ಬಂದೋಬಸ್ತ್ನಲ್ಲಿದ್ದರು.
