ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ನಡೆಸಲು ಕಾಂಗ್ರೆಸ್ ವಿಫಲ ಆಗಿದೆ. ಇದರ ನೈತಿಕ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ನಮ್ಮ ಗೃಹ ಇಲಾಖೆ ಸತ್ತು ಹೋಗಿದ್ಯಾ? ಇದೆಂಥಾ ಗುಲಾಮಗಿರಿ ಸರ್ಕಾರ? ಅಂತ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕೆಂಡ ಕಾರಿದರು. ಯಲಹಂಕದ ಕೋಗಿಲು ಲೇಔಟ್ನಲ್ಲಿ ಅಕ್ರಮವಾಗಿ ನೆಲೆಸಿದ್ದವರು ರೋಹಿಂಗ್ಯಾಗಳಾಗಿರಬಹುದು ಎಂದು ಬಿಜೆಪಿ ಅನುಮಾನ ಪಟ್ಟಿದೆ. ಈ ಸಂಬಂಧ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿದರು. ಕೋಗಿಲು ಲೇಔಟ್ನಲ್ಲಿ ರೋಗಿಂಗ್ಯಾಗಳು ಎಂಬ ಮಾಹಿತಿ ಇದೆ. ಇದರ ಬಗ್ಗೆ ಸರ್ಕಾರ ಪರಿಶೀಲಿಸಬೇಕು ಎಂದು ಆಗ್ರಹಿಸಿದರು. ನಮ್ಮ ರಾಜ್ಯದವರಲ್ಲದ ಪರರಾಜ್ಯದ ಹಾಗೂ ಬಾಂಗ್ಲಾ ಜನರಿಗೆ ಸರ್ಕಾರ ಪುನರ್ವಸತಿ ಕಲ್ಪಿಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಕೇರಳ ಹಾಗೂ ಹೈಕಮಾಂಡ್ ಗುಲಾಮಗಿರಿ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಸರ್ಕಾರದಲ್ಲಿ ವ್ಯವಸ್ಥಿತ ಪಿತೂರಿ ನಡೀತಿದೆ. ಕೋಗಿಲು ಲೇಔಟ್ನಲ್ಲಿದ್ದವರು ಆ ಜನ ಯಾರು ಎಲ್ಲಿಯವರು ಅಂತ ಸರ್ಕಾರ ಪರಿಶೀಲನೆ ಮಾಡಿದೆಯಾ? ಹೈಕಮಾಂಡ್ ತಾಕೀತು ಮಾಡಿದ್ರು ಅಂತ ಪುನರ್ವಸತಿ ಕೊಡ್ತಿದ್ದಾರೆ. ಇಲ್ಲಿಯವರೆಗೆ ಎಲ್ಲೆಲ್ಲಿ ಈಥರ ತೆರವು ಕಾರ್ಯಾಚರಣೆ ಆಗಿದೆಯೋ ಅವರಿಗೂ ಪುನರ್ವಸತಿ ಕೊಡಿ. ಇಲ್ಲಿಯವರೇ ಅನೇಕ ಜನ ಮನೆಗಳನ್ನ ಈ ಹಿಂದೆ ಕಳೆದುಕೊಂಡಿದ್ದಾರೆ. ಅವರಿಗೂ ಮನೆ ಕೊಡಿ. ಬಾಂಗ್ಲಾದಿಂದ ಬಂದವರಿಗೆ ಮನೆಗಳನ್ನ ಕೊಡ್ತಿದ್ದೀರಿ, ಇದು ಸರಿಯಲ್ಲ ಎಂದು ಒತ್ತಾಯಿಸಿದ್ರು.
