ಉದಯವಾಹಿನಿ, ವಡೋದರ: ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಏಕದಿನ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಯುವ ವೇಗಿ ಅರ್ಷದೀಪ್ ಸಿಂಗ್ಗೆ ಅವಕಾಶ ನೀಡದೆ, ಹರ್ಷಿತ್ ರಾಣಾಗೆ ಚಾನ್ಸ್ ನೀಡಿರುವ ಬಗ್ಗೆ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಫ್ಯಾನ್ಸ್ ಗುಡುಗಿದ್ದಾರೆ. ಅಂದ ಹಾಗೆ ನಾಯಕ ಶುಭಮನ್ ಗಿಲ್ ಹಾಗೂ ಉಪ ನಾಯಕ ಶ್ರೇಯಸ್ ಅಯ್ಯರ್ ಪ್ರತ್ಯೇಕ ಗಾಯಗಳಿಂದ ಗುಣಮುಖರಾಗಿ ಇದೀಗ ಭಾರತ ತಂಡಕ್ಕೆ ಮರಳಿದ್ದಾರೆ.
ಭಾರತ ತಂಡದ ಪ್ಲೇಯಿಂಗ್ XIನ ವೇಗದ ಬೌಲಿಂಗ್ ವಿಭಾಗದಲ್ಲಿ ಮೊಹ್ಮಮ್ಮದ್ ಸಿರಾಜ್ ಹಾಗೂ ಹರ್ಷಿತ್ ರಾಣಾ ಆಡುತ್ತಿದ್ದಾರೆ. ಕಳೆದ ಸರಣಿಯಲ್ಲಿ ಅದ್ಭುತವಾಗಿ ಬೌಲ್ ಮಾಡಿದ್ದ ಅರ್ಷದೀಪ್ ಸಿಂಗ್ ಅವರನ್ನು ಮೊದಲನೇ ಪಂದ್ಯದಿಂದ ಕಡೆಗಣಿಸಲಾಗಿದೆ. ಇವರ ಜೊತೆಗೆ ಪ್ರಸಿಧ್ ಕೃಷ್ಣ ಅವರಿಗೂ ಚಾನ್ಸ್ ನೀಡಲಾಗಿದೆ. ಇದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಗೌತಮ್ ಗಂಭೀರ್ ಭಾರತ ತಂಡದಲ್ಲಿ ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದ್ದಾರೆಂದು ಅಭಿಮಾನಿಗಳು ದೂರಿದ್ದಾರೆ.
ದೇಶಿ ಕ್ರಿಕೆಟ್ನಲ್ಲಿ ಅರ್ಷ್ದೀಪ್ ಅವರ ಪ್ರದರ್ಶನವೂ ಅದ್ಭುತವಾಗಿತ್ತು. ನ್ಯೂಜಿಲೆಂಡ್ ಸರಣಿಗೂ ಮೊದಲು, ಅವರು ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಸಿಕ್ಕಿಂ ವಿರುದ್ಧ ಐದು ವಿಕೆಟ್ಗಳನ್ನು ಕಬಳಿಸಿದರು. ಇದು 50 ಓವರ್ಗಳ ಸ್ವರೂಪದಲ್ಲಿ ಅವರ ಲಯ ಮತ್ತು ನಿಯಂತ್ರಣವನ್ನು ಪ್ರದರ್ಶಿಸಿತು. ಅಭಿಮಾನಿಗಳು ಈ ನಿರ್ಧಾರವನ್ನು ಸ್ಪಷ್ಟವಾಗಿ ಪಕ್ಷಪಾತ ಎಂದು ಕರೆದರು, ಇದು ಇತ್ತೀಚಿನ ದಿನಗಳಲ್ಲಿ ಭಾರತೀಯ ಏಕದಿನ ತಂಡದ ಆಯ್ಕೆಗೆ ಸಂಬಂಧಿಸಿದಂತೆ ಹೆಚ್ಚಾಗಿ ಕೇಳಿಬರುವ ಪದವಾಗಿದೆ.
