ಉದಯವಾಹಿನಿ, ನವದೆಹಲಿ: ಅಗ್ನಿ ಅವಘಡ ಸಂಭವಿಸುವ ಸಮಯದಲ್ಲಿ ನಾನು ಮನೆಯಲ್ಲಿ ಇರಲಿಲ್ಲ. ನನ್ನ ಮನೆಯಲ್ಲಿ ಯಾವುದೇ ಹಣ ಪತ್ತೆಯಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಹೇಳಿದ್ದಾರೆ.
ತಮ್ಮ ಅಧಿಕೃತ ನಿವಾಸದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಸಂಭವಿಸಿದ ಬೆಂಕಿ ಘಟನೆ ಮತ್ತು ಅದರಲ್ಲಿ ಕಂಡುಬಂದ ಹಣದ ಆರೋಪಗಳ ಕುರಿತು ಸಂಸತ್ತಿನ ತನಿಖಾ ಸಮಿತಿಗೆ ತಮ್ಮ ಪ್ರತಿಕ್ರಿಯೆಯಲ್ಲಿ ಈ ಹೇಳಿಕೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಮೊದಲು ಬಂದವರು ಸರಿಯಾಗಿ ಸುರಕ್ಷಿತಗೊಳಿಸದ ಕಾರಣದಿಂದ ಇದು ಸಂಭವಿಸಿರಬಹುದು ಎಂದು ಆರೋಪಿಸಿದ್ದಾರೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಸಂದರ್ಭದಲ್ಲಿ ಅರ್ಧ-ಸುಟ್ಟ ರೂ.500 ನೋಟುಗಳ ಕಂತೆಗಳು ಪತ್ತೆಯಾಗಿತ್ತು. ಈ ಘಟನೆಯ ನಂತರ ಅವರನ್ನ ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು.

ಮಾಜಿ ಸಿಜೆಐ ಸಂಜೀವ್ ಖನ್ನಾ ಅವರು ರಚಿಸಿದ ಮೂವರು ಸದಸ್ಯರ ಆಂತರಿಕ ತನಿಖಾ ಸಮಿತಿಯು ನ್ಯಾಯಮೂರ್ತಿ ವರ್ಮಾ ಅವರ ವಿರುದ್ಧ ದುರಾಚರಣೆ ಇದೆ ಎಂದು ತೀರ್ಮಾನಿಸಿತ್ತು. ಇದರ ನಂತರ ಅವರು ರಾಜೀನಾಮೆ ನೀಡದ ಕಾರಣ, ಸಂಸತ್ತಿನಲ್ಲಿ ಮಹಾಭಿಯೋಗ ಸಂಬಂಧಿಸಿದ ನಿರ್ಣಯವನ್ನ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರು ಆಗಸ್ಟ್ 12, 2025ರಂದು ಅಂಗೀಕರಿಸಿದ್ದರು. ಈಗ ಸಂಸತ್ತು ರಚಿಸಿರುವ ಮೂವರು ಸದಸ್ಯರ ತನಿಖಾ ಸಮಿತಿ (ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ್ ಮತ್ತು ಹಿರಿಯ ವಕೀಲ ಬಿ.ವಿ. ಆಚಾರ್ಯ) ಈ ಪ್ರಕರಣವನ್ನು ತನಿಖೆ ಮಾಡುತ್ತಿದೆ.

Leave a Reply

Your email address will not be published. Required fields are marked *

error: Content is protected !!