ಉದಯವಾಹಿನಿ, ಬೆಂಗಳೂರು: ಜನರಿಗೆ ನಿರಾಶೆ ಮಾಡಬಾರದು, ಅದಕ್ಕೆ ಚಿನ್ನಸ್ವಾಮಿಯಲ್ಲಿ ಐಪಿಎಲ್ ಆಡೋದಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದೇವೆ ಎಂದು ಗೃಹ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಆಡೋದಕ್ಕೆ ಅನುಮತಿ ನೀಡಿದ ವಿಚಾರವಾಗಿ ಮಾತನಾಡಿ, ಕುನ್ಹಾ ಸಮಿತಿ ಕೆಲವೊಂದು ಶಿಫಾರಸ್ಸು ಮಾಡಿತ್ತು. ಅದರನ್ವಯ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ, ಜಿಬಿಎ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ವಿ. ನಾವು ಕುನ್ಹಾ ಅವರ ಶಿಫಾರಸ್ಸು ಕೆಎಸ್ಸಿಎಗೆ ಕಳಿಸಿ, ಇದನ್ನ ಸರಿಮಾಡಿ ಎಂದಿದ್ದೆವು. ಬಳಿಕ ಕೆಎಸ್ಸಿಎನವರು ಕೂಡ ಮನವಿ ಮಾಡಿ, ಎಲ್ಲವನ್ನ ಸರಿಪಡಿಸುತ್ತೇವೆ ಅಂತಾ ಹೇಳಿದ್ದರು. ಮಾರ್ಚ್ನಲ್ಲಿ ಐಪಿಎಲ್ ಶುರುವಾಗುತ್ತೆ. ಹೀಗಾಗಿ ಅಷ್ಟರಲ್ಲಿ ಶಾರ್ಟ್ಟೈಮ್ ಕಂಡೀಷನ್ ಪೂರೈಸಬೇಕು, ಅದಕ್ಕೆ ಷರತ್ತುಬದ್ದವಾಗಿ ಅನುಮತಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಎಲ್ಲವನ್ನ ಸರಿಪಡಿಸುತ್ತೇವೆ ಅಂತಾ ಕೆಎಸ್ಸಿಎ ಭರವಸೆ ಕೊಟ್ಟಿದೆ. ಹೀಗಾಗಿ ಮತ್ತೊಮ್ಮೆ ಎಲ್ಲವನ್ನು ಪರಿಶೀಲಿಸುತ್ತೇವೆ, ಎಲ್ಲವನ್ನು ಸರಿ ಮಾಡಿದ್ರೆ, ಅನುಮತಿ ಕೊಡ್ತೇವೆ. ಜೊತೆಗೆ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದೆ, ಜನರಿಗೆ ನಿರಾಶೆ ಮಾಡಬಾರದು. ಈಗಾಗಲೇ ಕೆಲಸ ಶುರುವಾಗಿದೆ. ಗೇಟ್ ಎಲ್ಲ ಕಿತ್ತಾಕಿದ್ದಾರೆ. ದಾರಿಯಲ್ಲಿ ಬರೋವಾಗ ನೋಡಿದ್ದೇನೆ ಎಂದಿದ್ದಾರೆ.
