ಉದಯವಾಹಿನಿ, ಮಂಗಳೂರು: ದೇವಸ್ಥಾನದಲ್ಲಿ ಕೇಸರಿ ಸೇರಿದಂತೆ ಯಾವುದೇ ಧ್ವಜ ಹಾರಿಸಬೇಡಿ ಎಂದು ಮಾಜಿ ಸಚಿವ ರಮಾನಾಥ ರೈ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮಂಗಳೂರಿನ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹದ ಸಂದರ್ಭ ಮಾತನಾಡಿದ ಅವರು, ದೇವಸ್ಥಾನದಲ್ಲಿ ಭಗವಾಧ್ವಜ ಹಾರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿಶ್ವ ಪ್ರಸಿದ್ಧ ಉಡುಪಿ ಮಠ ಪರ್ಯಾಯ ಮಹೋತ್ಸವದ ಸಂದರ್ಭ ಕೇಸರಿ ಧ್ವಜ ಹಿಡಿದ ಉಡುಪಿ ಜಿಲ್ಲಾಧಿಕಾರಿ ನಡೆಯನ್ನು ಖಂಡಿಸಿದ್ದಾರೆ.
ದೇವಾಲಯದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಪತಾಕೆ ಹಾರಿಸಿರುವುದನ್ನು ಧಿಕ್ಕರಿಸಬೇಕು. ಉಡುಪಿ ಮಠದಲ್ಲಿ ಕೇಸರಿ ಧ್ವಜ ಹಾರಿಸಿದ್ದು ತಪ್ಪು ಎಂದು ಕಾಂಗ್ರೆಸ್ಸಿಗರು ಹೇಳಬೇಕು. ದೇವಸ್ಥಾನದಲ್ಲಿ ಕಾಂಗ್ರೆಸ್ ಪತಾಕೆ, ಕೇಸರಿ, ಹಸಿರು ಯಾವುದೇ ಪತಾಕೆ ಹಾಕಬೇಡಿ. ದೇವಸ್ಥಾನದ ಕಾರ್ಯಕ್ರಮ ಎಲ್ಲರಿಗೂ ಸಮಾನವಾದ ಕಾರ್ಯಕ್ರಮ. ರಾಜಕೀಯ ಪ್ರೇರಿತ ಪತಾಕೆ ಯಾರು ಹಾರಿಸ್ತಾರೆ ಅದನ್ನ ನಾವು ಧಿಕ್ಕರಿಸಬೇಕು. ದೇವಾಲಯದ ಉತ್ಸವಗಳಲ್ಲಿ ಭಗವಾಧ್ವಜ ಹಾರಿಸುವುದನ್ನು ವಿರೋಧಿಸಬೇಕು ಎಂದು ಹೇಳಿದ್ದಾರೆ.
