ಉದಯವಾಹಿನಿ, ಚಿಕ್ಕಮಗಳೂರು: ಯಾವ ಮತೀಯ ಗ್ರಂಥ ಕೋಮುಗಲಭೆಗೆ ಕಾರಣವಾಗ್ತಿದೆ, ಜಾಗತಿಕ ಭಯೋತ್ಪಾದನೆಗೆ ಕಾರಣವಾಗಿ ಮಕ್ಕಳ ಕೈಗೆ ಕಲ್ಲು ಕೊಟ್ಟು ದೇವರಿಗೆ ಹೊಡೆಸುತ್ತಿದೆ. ಅವರಿಗೆ ನೋಟಿಸ್ ಕೊಡಿ ಎಂದು ಸರ್ಕಾರದ ವಿರುದ್ಧ ಎಂಎಲ್ಸಿ ಸಿ.ಟಿ ರವಿ ಕಿಡಿ ಕಾರಿದ್ದಾರೆ.ಚಿಕ್ಕಮಗಳೂರಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ತರೀಕೆರೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣ ಮಸೂದೆ 2025 ಉಲ್ಲಂಘನೆ ಆಗದಂತೆ ನೋಡಿಕೊಳ್ಳಿ ಎಂದು ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಕಾನೂನಿನ ಅರಿವಿಲ್ಲದ ಪೊಲೀಸರಿಗೆ ಅರಿವು ಮೂಡಿಸಬೇಕಿದೆ. ಅಂಬೇಡ್ಕರ್ ಅವರು ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಕೋಲೆ ತೊಡಿಸಲು ಹೊರಟಿದ್ದೀರಾ? ತುರ್ತು ಪರಿಸ್ಥಿತಿ ಹೇರಿ ನಾಗರಿಕ ಹಕ್ಕುಗಳನ್ನು ಧಮನ ಮಾಡಿದಂತಹ ಕಾಂಗ್ರೆಸ್ ಈಗ ಬಾಯಿಗೆ ಬೀಗ ಹಾಕೋಕೆ ಹೊರಟಿದೆ ಎಂದು ಅಸಮಾಧಾನ ಹೊರಹಾಕಿದರು.
ನಿಮಗೆ ಧೈರ್ಯ ಇದ್ದರೆ ಭಯೋತ್ಪಾದನೆಗೆ ಕಾರಣವಾಗಿ, ಮಕ್ಕಳ ಕೈಗೆ ಕಲ್ಲು ಕೊಟ್ಟು ದೇವರಿಗೆ ಹೊಡೆಸುತ್ತಿದೆ, ಅವರಿಗೆ ನೋಟಿಸ್ ಕೊಡಿ. ಇದಕ್ಕೆಲ್ಲ ಹೆದರಿ ನಾವು ಸುಮ್ಮನಿರುವುದಿಲ್ಲ. ಸತ್ಯ ಹೇಳುವುದನ್ನು ನಿಲ್ಲಿಸಲ್ಲ ಎಂದಿದ್ದಾರೆ.ಅಸಲಿಗೆ ಈ ಕಾಯ್ದೆ ಜಾರಿಗೆ ಬಂದಿಲ್ಲ. ರಾಜ್ಯಪಾಲರ ಮುದ್ರೆಯೇ ಬಿದ್ದಿಲ್ಲ. ಆದರೂ, ಸರ್ಕಾರ ಕಾನೂನು ಕಾಯೋ ಪೊಲೀಸರನ್ನು ಬಳಸಿಕೊಂಡು ಬಲವಂತವಾಗಿ ಕಾಯ್ದೆ ಜಾರಿಗೆ ಮುಂದಾಗಿದೆ. ಈಗಾಗಲೇ ಹಿಂದೂಗಳ ಬಾಯಿ ಮುಚ್ಚಿಸಲು ಸರ್ಕಾರ ಮುಂದಾಗಿದೆ ಎಂದು ಸರ್ಕಾರದ ವಿರುದ್ಧ ವಿಪಕ್ಷ ಕಿಡಿಕಾರುತ್ತಿದೆ.
ರಾಜ್ಯಪಾಲರ ಅಧಿಕೃತ ಮುದ್ರೆ ಬೀಳುವ ಮುನ್ನವೇ ಸರ್ಕಾರ ಕಾನೂನನ್ನೇ ಮೀರಿ ದ್ವೇಷಭಾಷಣ ಕಾಯ್ದೆಯನ್ನ ಜಾರಿಗೆ ತರಲು ಮುಂದಾಗಿದೆ. ಸಂವಿಧಾನ ಕೊಟ್ಟಿರುವ ವಾಕ್ ಸ್ವಾತಂತ್ರ್ಯದ ಹಕ್ಕನ್ನೇ ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ. ಅದಕ್ಕೆ ಕಾನೂನು ಕಾಯೋ ಪೊಲೀಸರನ್ನೇ ದುರ್ಬಳಕೆ ಮಾಡಿಕೊಂಡಿದೆ. ಹಿಂದೂ ಸಮಾಜೋತ್ಸವದ ಕಾರ್ಯಕ್ರಮಕ್ಕೆ ನೀವು ಹೀಗೆ ಮಾತನಾಡಿ ಎಂದು ಭಾಷಣಕಾರರಿಗೆ ಪೊಲೀಸರು ಕೊಟ್ಟಿರೋ ನೋಟಿಸ್ ಇದು. ಅಂಬೇಡ್ಕರ್ ಬರೆದ ಸಂವಿಧಾನದ ರಾಜ್ಯವಾ ಎಂಬ ಪ್ರಶ್ನೆ ಮೂಡಿದ್ದು ಸರ್ಕಾರದ ನಡೆ ರಾಜ್ಯದ ಹಿಂದೂಗಳಲ್ಲಿ ತಲ್ಲಣ ಮೂಡಿಸಿದೆ ಎಂದು ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.
