ಉದಯವಾಹಿನಿ, ಶಿಮ್ಲಾ: ಪ್ರಾಣಿಗಳಿಗೆ ಪ್ರೀತಿ ತೋರಿಸಿದರೆ ಅವು ಪ್ರಾಣವನ್ನೂ ಲೆಕ್ಕಿಸದೆ ಮಾಲಕನನ್ನು ರಕ್ಷಿಸಿದ ಅನೇಕ ಉದಾಹರಣೆಗಳನ್ನು ನಾವು ಕಂಡಿದ್ದೇವೆ. ಪ್ರಾಣಿಗಳು ಮನುಷ್ಯರಿಗಿಂತಲೂ ಹೆಚ್ಚಾಗಿ ಪ್ರೀತಿ ಮತ್ತು ನಿಷ್ಠೆಯನ್ನು ಹೊಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೌರ್ನಲ್ಲಿ ಹೃದಯಸ್ಪರ್ಶಿ ಘಟನೆಯೊಂದು ಕಂಡು ಬಂದಿದೆ. ನಾಯಿಯೊಂದು ಮತ್ತೊಮ್ಮೆ ತನ್ನ ಮಾಲಕನ ಜತೆ ನಿಷ್ಠೆಯನ್ನು ಸಾಬೀತುಪಡಿಸಿದೆ. ನಿಷ್ಠಾವಂತ ಪಿಟ್ಬುಲ್ ಶ್ವಾನವೊಂದು ತನ್ನ ಮೃತ ಮಾಲಕನ ಪಕ್ಕದಲ್ಲಿ ನಾಲ್ಕು ದಿನಗಳ ಕಾಲ ಬಿಟ್ಟು ಕದಲದ ವಿಡಿಯೊವೊಂದು ನೋಡುಗರನ್ನು ಮೂಕರನ್ನಾಗಿಸಿದೆ.
ಭರ್ಮೌರ್ನ ಭರ್ಮಣಿ ದೇವಸ್ಥಾನದ ಬಳಿ ವಿಕ್ಷಿತ್ ರಾಣಾ ಮತ್ತು ಪಿಯೂಷ್ ಎಂಬ ಇಬ್ಬರು ಯುವಕರು ಕಾಣೆಯಾಗಿದ್ದು, ನಂತರ ಅವರು ಹವಾಮಾನ ವೈಪರೀತ್ಯದ ನಡುವೆ ಹಿಮದಲ್ಲಿ ಸಿಲುಕಿಕೊಂಡು ಸಾವನ್ನಪ್ಪಿರುವುದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ರಕ್ಷಣಾ ತಂಡಗಳು ಮತ್ತು ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ತಲುಪಿದಾಗ ಹೃದಯ ವಿದ್ರಾವಕ ದೃಶ್ಯ ಕಂಡು ಬಂದಿದೆ. ಮೈ ಕೊರೆಯುವ ಚಳಿಯಲ್ಲೂ ಕೂಡ ನಾಯಿ ತನ್ನ ಮೃತ ಯಜಮಾನನನ್ನು ಬಿಟ್ಟು ಕದಲದೆ ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡಿದೆ.
