ಉದಯವಾಹಿನಿ, ಗದಗ: ಲಕ್ಕುಂಡಿಯಲ್ಲಿ ಇಂದು 15ನೇ ದಿನದ ಉತ್ಖನನ ಕಾರ್ಯ ಭರದಿಂದ ಸಾಗಿದೆ. ಲಕ್ಕುಂಡಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಕುಂಬಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮನೆಗಳ ಸ್ಥಳಾಂತರಿಸುವಂತೆ ಸೂಚಿಸಿದರು. ಗುಪ್ತ ನಿಧಿ ಪತ್ತೆ ಹಾಗೂ ಉತ್ಖನನ ನಡೆಯುತ್ತಿರುವ ಬೆನ್ನಲ್ಲೇ ಲಕ್ಕುಂಡಿ ಅಭಿವೃದ್ಧಿಗೆ ವಿದೇಶದ ಸರ್ಕಾರೇತರ ಸಂಸ್ಥೆ ಆಸಕ್ತಿ ತೋರಿಸಿದೆ.
ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಲಕ್ಕುಂಡಿಗೆ ಭೇಟಿ ನೀಡಿ ಅನೇಕ ದೇವಸ್ಥಾನ ಹಾಗೂ ಪ್ರಾಚ್ಯಾವಶೇಷಗಳ ಬಯಲು ವಸ್ತು ಸಂಗ್ರಹಾಲಯ ವೀಕ್ಷಣೆ ಮಾಡಿದರು. ಇಟಲಿ ಹಾಗೂ ಗ್ರೀಸ್ ದೇಶದ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಹೆಲೆನ್ ಡಾ. ಸ್ಟೆಫೆನ್, ಡಾ. ಅಲೆಕ್ಸಾಂಡರ್, ವೈಶಾಖ ಹಾಗೂ ಚಿರಣ್ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿತು.
ಲಕ್ಕುಂಡಿಯಲ್ಲಿ ಸಿಕ್ಕ ಪ್ರಾಚ್ಯಾವಶೇಷಗಳನ್ನು ಸಂಗ್ರಹಣೆ ಮಾಡಿ ಸುಮಾರು 3 ಎಕರೆ ಜಾಗೆಯಲ್ಲಿಟ್ಟು ಬಯಲು ವಸ್ತು ಸಂಗ್ರಹಾಲಯ ಮಾಡಲಾಗಿದೆ. ಅದನ್ನು 2.25 ಲಕ್ಷ ರೂಪಾಯಿ ವ್ಯಚ್ಚದಲ್ಲಿ ಅಭಿವೃದ್ಧಿಗೆ ಸರ್ಕಾರ ಪ್ಲಾನ್ ಮಾಡಿದೆ. ಸರ್ಕಾರದಿಂದ ಟೆಂಡರ್ ಪಡೆದು ಅಭಿವೃದ್ಧಿ ಪಡೆಸಲು ಈ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಟೀಮ್ ಮುಂದಾಗಿದೆ. ಶೀಘ್ರದಲ್ಲೇ ಪ್ರೊಜೆಕ್ಟ್ ರಿಪೋರ್ಟ್ ತಯಾರಿಸಿ ನಂತರ ಬಯಲು ವಸ್ತು ಸಂಗ್ರಹಾಲಯ ಹಾಗೂ ಲಕ್ಕುಂಡಿ ಗೈಡ್ ಬುಕ್ ತಯಾರು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಕ್ಕುಂಡಿಯ ಬಗ್ಗೆ ಕನ್ನಡ, ಇಂಗ್ಲೀಷ್ನಲ್ಲಿ ಗೈಡ್ ಪುಸ್ತಕ ಸಿದ್ಧವಾಗಲಿದೆ ಅಂತಿದ್ದಾರೆ ಅಧಿಕಾರಿಗಳು.
