ಉದಯವಾಹಿನಿ, ಲಕ್ನೋ: ಹೋಂವರ್ಕ್ ಪೂರ್ಣಗೊಳಿಸದ ಕಾರಣಕ್ಕೆ ಎರಡನೇ ತರಗತಿ ಮಗುವಿಗೆ ಬಾಸುಂಡೆ ಬರುವವರೆಗೂ ನೂರವೈತು ಬಾರಿ ಥಳಿಸಿದ ಆರೋಪ ಶಿಕ್ಷಕನ ವಿರುದ್ಧ ಕೇಳಿ ಬಂದಿದೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಕರ್ನೈಲಗಂಜ್ ಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿದೆ.
ಎಂಆರ್‌ಜಿ ಶಾಲೆಯ ಇಂಗ್ಲಿಷ್ ಶಿಕ್ಷಕ ಪ್ರಖರ್ ಸಿಂಗ್ ಎಂಬಾತ ಮಗುವಿನ ಮೇಲೆ‌ ಹಲ್ಲೆ ನಡೆಸಿದ್ದಾನೆ ಆರೋಪಿಸಲಾಗಿದೆ. ಹೋಂವರ್ಕ್ ಪೂರ್ಣಗೊಳಿಸದ ಕಾರಣದಿಂದ ಶಿಕ್ಷಕರು ಕೋಪಗೊಂಡು ಮಗುವಿನ ಕಾಲುಗಳ ಮೇಲೆ ಪದೇ ಪದೆ ಹೊಡೆದಿದ್ದಾರೆ. ಇದರಿಂದ ಮಗುವಿನ ಕಾಲುಗಳಲ್ಲಿ ಗಾಯದ ಗುರುತುಗಳು, ಊತ ಮತ್ತು ತೀವ್ರ ನೋವು ಉಂಟಾಗಿದೆ ಎಂದು ತಿಳಿದುಬಂದಿದೆ.
ಮಗು ಮನೆಗೆ ತಲುಪಿದಾಗ ಕುಂಟುತ್ತಾ ಬಂದಿದ್ದು, ದೇಹದ ಮೇಲಿನ ಗಾಯದ ಗುರುತುಗಳನ್ನು ನೋಡಿ ಕುಟುಂಬಸ್ಥರು ಆಘಾತಗೊಂಡರು. ಮಗುವಿನ ತಂದೆ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ನಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 115 (2), 351 (3) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕರ್ನೈಲಗಂಜ್ ಸರ್ಕಲ್ ಆಫೀಸರ್ ಅಭಿಷೇಕ್ ದಬಾಚಾ ತಿಳಿಸಿದ್ದಾರೆ. ಘಟನೆ ಬಳಿಕ ಶಾಲಾ ಪ್ರಾಂಶುಪಾಲರು ತಕ್ಷಣವೇ ಇಂಗ್ಲಿಷ್ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!