ಉದಯವಾಹಿನಿ, ಹಾಸನ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಪತಿ ವಂಚಿಸಿರುವ ಪ್ರಕರಣ ಅರಕಲಗೂಡು ತಾಲೂಕಿನ ಬ್ರಾಹ್ಮಣರ ಬೀದಿಯಲ್ಲಿ ನಡೆದಿದೆ. ಆಕೆ ವಾಸವಿದ್ದ ರೂಮ್‌ಗೆ ನುಗ್ಗಿ ಖಾಲಿ ಮಾಡುವಂತೆ ಆತನ ಕುಟುಂಬಸ್ಥರು ದಾಂಧಲೆ ನಡೆಸಿದ್ದಾರೆ.
ಮೂರು ವರ್ಷದ ಹಿಂದೆ ವಂಚನೆಗೊಳಗಾದ ಮಹಿಳೆ ಹಾಗೂ ಶಶಿಕುಮಾರ್ ಲವ್ ಮ್ಯಾರೇಜ್ ಆಗಿದ್ದರು. ಶಶಿಕುಮಾರ್ ಡ್ರೈವಿಂಗ್ ಕೆಲಸ ಮಾಡುತ್ತಿದ್ದು ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಯಿಂದ ದೂರವಾಗಿದ್ದ.‌ ಆಕೆ ಉಳಿದುಕೊಳ್ಳಲು ಪತಿ ಮನೆಯ ಮೇಲಿನ ರೂಂನ್ನು ಶಶಿಕುಮಾರ್ ಪೋಷಕರು ಬಿಟ್ಟುಕೊಟ್ಟಿದ್ದರು.
ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿಕೊಂಡು ಮಗುವನ್ನು ಸಾಕುತ್ತಿದ್ದ ಮಹಿಳೆ ವಿಚ್ಛೇದನ ಹಾಗೂ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಮನೆ ಹಾಗೂ ಆಸ್ತಿಯನ್ನು ತನ್ನ ಹೆಣ್ಣುಮಕ್ಕಳಿಗೆ ಮಾವ ಗೋಪಾಲಶೆಟ್ಟಿ ದಾನ ಪತ್ರ ಬರೆದಿದ್ದರು. ಇದನ್ನೇ ನೆಪ ಮಾಡಿಕೊಂಡ ಶಶಿಕುಮಾರ್ ಸಹೋದರಿಯರು ರೂಂ ಖಾಲಿ ಮಾಡುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದರು.

ರೂಮ್ ಖಾಲಿ ಮಾಡದೇ ಇದ್ದುದ್ದರಿಂದ ರೂಂಗೆ ನುಗ್ಗಿ ಶೀಟ್‌ಗಳನ್ನು ಒಡೆದು ಹಾಕಿ, ಪಾತ್ರೆಗಳನ್ನು ಹೊರಗೆ ಎಸೆದು ಮಹಿಳೆ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೆರದಿದ್ದಾರೆ. ಗಾಯಾಳು ಮಹಿಳೆಗೆ ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು – ಪ್ರತಿದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!