ಉದಯವಾಹಿನಿ, ನವದೆಹಲಿ: ಹೇಳಿದ್ದಕ್ಕಿಂತ ಚಿಕ್ಕದಾಗಿ ಕೂದಲು ಕತ್ತರಿಸಿ, ವೃತ್ತಿಯಲ್ಲಿ ನಷ್ಟ ಉಂಟಾಗಿದ್ದಕ್ಕೆ 2 ಕೋಟಿ ರೂಪಾಯಿ ದಂಡ ವಿಧಿಸಿದ್ದ ಗ್ರಾಹಕ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್​ ಮಾರ್ಪಡಿಸಿದೆ.

ಐಷಾರಾಮಿ ಹೋಟೆಲ್​​ನಲ್ಲಿನ ಸಲೂನ್‌ನಲ್ಲಿ ದೋಷಪೂರಿತ ಕ್ಷೌರಕ್ಕಾಗಿ ಮಹಿಳೆಗೆ ಪರಿಹಾರವಾಗಿ ನೀಡಲು ಆದೇಶಿಸಿದ್ದ 2 ಕೋಟಿ ರೂಪಾಯಿ ದಂಡವನ್ನು 25 ಲಕ್ಷ ರೂಪಾಯಿಗೆ ಇಳಿಸಿ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ಪೀಠ ತೀರ್ಪಿತ್ತಿದೆ.
ಕೇಳಿದಷ್ಟು ಪರಿಹಾರ ಕೊಡಲಾಗದು: ಸೇವೆಯಲ್ಲಿ ತಪ್ಪಾಗಿದ್ದರೂ ಗ್ರಾಹಕ ವಿವಾದಗಳಲ್ಲಿ ಸೂಚಿಸುವ ಪರಿಹಾರವು ಆದ ನಷ್ಟಕ್ಕೆ ಹತ್ತಿರವಿರಬೇಕು. ದೂರುದಾರರ ಇಚ್ಛೆ ಮತ್ತು ಕಲ್ಪನೆಯ ಆಧಾರದ ಮೇಲೆ ಅಲ್ಲ ಎಂದು ಫೆಬ್ರವರಿ 6 ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಪೀಠ ಹೇಳಿದೆ.
ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗವು ಸಣ್ಣ ಪ್ರಮಾದಕ್ಕೆ ದೊಡ್ಡ ಪರಿಹಾರ ಮೊತ್ತ ನೀಡಲು ಸೂಚಿಸಿ ತಪ್ಪೆಸಗಿದೆ. ದೂರುದಾರರಿಗೆ ಆದ ನಷ್ಟವನ್ನು ತುಂಬುವ ಜೊತೆಗೆ ಪ್ರತಿವಾದಿ ಬಂಧನಕ್ಕೂ ಒಳಗಾಗಿದ್ದಾರೆ. ಹೀಗಾಗಿ, ಎರಡೂ ಶಿಕ್ಷೆಯನ್ನು ಘೋಷಿಸಿದ್ದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ದೂರುದಾರರು ಹೇಗೆ 2 ಕೋಟಿ ರೂಪಾಯಿ ಮೊತ್ತದಷ್ಟು ನಷ್ಟ ಅನುಭವಿಸಿದರು ಎಂಬುದನ್ನು ಗ್ರಾಹಕ ನ್ಯಾಯಾಲಯ ವಿವರಿಸಿಲ್ಲ. ಆಕ್ಷೇಪಾರ್ಹ ತೀರ್ಪಿನಲ್ಲಿ ಈ ಸಣ್ಣ ಅಂಶವನ್ನು ಸಮರ್ಥಿಸುವ ಸಾಕ್ಷ್ಯಗಳಿಲ್ಲ ಎಂದು ಪೀಠವು ಗುರುತಿಸಿದೆ.

ಏನಿದು ಪ್ರಕರಣ?: 2018ರಲ್ಲಿ ಈವೆಂಟ್ ಮ್ಯಾನೇಜ್​ಮೆಂಟ್​ ಉದ್ಯೋಗಿಯಾಗಿದ್ದ ಆಶ್ನಾ ರಾಯ್​ ಎಂಬವರು ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿರುವ ಸಲೂನ್‌ಗೆ ಕ್ಷೌರಕ್ಕಾಗಿ ತೆರಳಿದ್ದರು. ಈ ವೇಳೆ, ಅಲ್ಲಿಯ ಸ್ಟೈಲಿಸ್ಟ್ ಕೂದಲನ್ನು ಹೇಳಿದ್ದಕ್ಕಿಂತ ತುಸು ಹೆಚ್ಚಾಗಿ ಕತ್ತರಿಸಿದ್ದರು. ಇದರಿಂದ ತನಗೆ ಮಾನಸಿಕ ಆಘಾತ, ಲಾಭದಾಯಕ ಮಾಡೆಲಿಂಗ್ ಯೋಜನೆಗಳು ಕೈತಪ್ಪಿ ವೃತ್ತಿಯಲ್ಲಿ ನಷ್ಟವಾಗಿದೆ ಎಂದು ಆಶ್ನಾ ರಾಯ್ ಆರೋಪಿಸಿದ್ದರು.

ಇದೇ ಆರೋಪದ ಮೇಲೆ ಗ್ರಾಹಕ ವ್ಯಾಜ್ಯ ಕೋರ್ಟ್​ಗೆ ದೂರು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಆದ ನಷ್ಟಕ್ಕೆ ಪರಿಹಾರವಾಗಿ 2 ಕೋಟಿ ರೂಪಾಯಿ ನೀಡಲು ಆದೇಶಿಸಿತ್ತು. ದುಪ್ಪಟ್ಟು ದಂಡ ವಿಧಿಸಿದ್ದರ ವಿರುದ್ಧ ಸಲೂನ್​ ಮಾಲೀಕರು ಸುಪ್ರೀಂ ಕೋರ್ಟ್​​ನಲ್ಲಿ ಪ್ರಶ್ನಿಸಿದ್ದರು. ಮೊತ್ತದ ಮರುಮೌಲ್ಯಮಾಪನ ಮಾಡಲು ಸುಪ್ರೀಂ ಕೋರ್ಟ್ ಸೂಚಿಸಿ ನಂತರೂ, ಗ್ರಾಹಕರ ಆಯೋಗವು 2023 ರಲ್ಲಿ ಇದೇ ದಂಡವನ್ನು ಪುನರುಚ್ಚರಿಸಿತ್ತು.

Leave a Reply

Your email address will not be published. Required fields are marked *

error: Content is protected !!