ಉದಯವಾಹಿನಿ, ಬೆಂಗಳೂರು: ಪಂಚ ಗ್ಯಾರಂಟಿಗಳು ಪಂಚರ್ ಆಗಿ ವರ್ಷಗಳೇ ಕಳೆದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ಸಾಧನಾ ಸಮಾವೇಶದ ( ವಿಚಾರಕ್ಕೆ ವ್ಯಂಗ್ಯವಾಡಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ನ ಸಾವಿರ ದಿನಗಳ ಸಾಧನಾ ಸಮಾವೇಶದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ, ಮೋದಿ ಸರ್ಕಾರದ್ದು ಕಾಯಕವೇ ಕೈಲಾಸ ನೀತಿ. ಸಿದ್ದರಾಮಯ್ಯ ಅವರದ್ದು ಜನರಿಗೆ ಕಾಯಿಸುವುದೇ ಕೈಲಾಸ ನೀತಿಯಾಗಿದೆ. ಅವರ ಯೋಜನೆಗಳು ರಾಜ್ಯದ ಜನರಿಗೆ ಕಾಯುವುದೇ ಕೈಲಾಸ ಅನ್ನುವ ರೀತಿ ಸತಾಯಿಸ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯವನ್ನು ಸಿದ್ದರಾಮಯ್ಯ ಕುಡುಕರ ರಾಜ್ಯ ಮಾಡ್ತಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಮಹಾತ್ಮಾ ಗಾಂಧಿಗೆ ಅಪಮಾನ ಮಾಡಲಾಗ್ತಿದೆ. ನೂರು ಸುಳ್ಳು ಹೇಳಿ ಮದುವೆ ಮಾಡು ಎನ್ನುವಂತೆ ಸಾವಿರ ಸುಳ್ಳು ಹೇಳಿ ನಾಡಿನ ಜನರಿಗೆ ಅನ್ಯಾಯ ಎಸಗಿದ್ದಾರೆ. ಅಹಿಂದ ಹೆಸರಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ, ಒಕ್ಕಲಿಗ ಸಮುದಾಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ.
ರಾಮರಾಜ್ಯ ಮಾಡ್ತೀವಿ ಅಂತ ಅಧಿಕಾರಕ್ಕೆ ಬಂದು, ಜನರ ಕಿವಿಗೆ ಹೂ ಮುಡಿಸಿದ್ದಾರೆ. ವಾಲ್ಮೀಕಿ ನಿಗಮ ಹಗರಣ, ಅಬಕಾರಿ, ಸ್ಮಾರ್ಟ್ ಮೀಟರ್ ಹಗರಣ, ಗೃಹಲಕ್ಷ್ಮಿ ಹಗರಣ, ಮುಡಾ ಹಗರಣಗಳನ್ನು ಮಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ರೂ. ಎಲ್ಲಿಗೆ ಹೋಗಿದೆ ಅಂತ ಸಿಎಂ ಇನ್ನೂ ಉತ್ತರ ಕೊಟ್ಟಿಲ್ಲ. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ. ಕಾಂಗ್ರೆಸ್ ಹೈಕಮಾಂಡ್ಗೆ ರಾಜ್ಯವನ್ನು ಸರ್ಕಾರ ಅಡ ಇಟ್ಟಿದೆ ಎಂದು ಕಿಡಿಕಾರಿದ್ದಾರೆ.
