ಉದಯವಾಹಿನಿ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಪ್ರಮುಖವಾದ ಕೇದಾರನಾಥ ದೇವಾಲಯದ ದ್ವಾರಗಳು 22 ಏಪ್ರಿಲ್ 2026 ರಂದು ಭಕ್ತರಿಗೆ ತೆರೆಯಲಿವೆ. ಉತ್ತರಾಖಂಡದ ಹಿಮಾಲಯ ಪ್ರದೇಶದಲ್ಲಿರುವ ಈ ಪವಿತ್ರ ಶಿವಕ್ಷೇತ್ರಕ್ಕೆ ಪ್ರತಿವರ್ಷ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ.
ವೃಷಭ ಲಗ್ನದಲ್ಲಿ ಬೆಳಿಗ್ಗೆ 8 ಗಂಟೆಗೆ ಧಾಮದ ಬಾಗಿಲುಗಳು ತೆರೆಯಲಿದ್ದು, ಹೊಸ ತೀರ್ಥಯಾತ್ರಾ ಅವಧಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ದಿನಾಂಕವನ್ನು ಉಖಿಮಠದಲ್ಲಿರುವ ಓಂಕಾರೇಶ್ವರ ದೇವಸ್ಥಾನದಲ್ಲಿ ಘೋಷಿಸಲಾಗಿದೆ. ಚಳಿಗಾಲದಲ್ಲಿ ಕೇದಾರನಾಥನ ಉತ್ಸವ ಮೂರ್ತಿಯನ್ನು ಇಲ್ಲಿ ಇಡಲಾಗುತ್ತದೆ.
ಇದೇ ವೇಳೆ ಚಾರ್ ಧಾಮ ಯಾತ್ರೆಯ ಇತರೆ ದೇವಾಲಯಗಳ ದಿನಾಂಕಗಳೂ ಪ್ರಕಟಗೊಂಡಿವೆ. ಬದರಿನಾಥ ದೇವಾಲಯ 23 ಏಪ್ರಿಲ್ 2026 ರಂದು ಬೆಳಿಗ್ಗೆ 6:15 ಕ್ಕೆ ದ್ವಾರ ತೆರೆದುಕೊಳ್ಳಲಿದೆ. ಗಂಗೋತ್ರಿ ದೇವಸ್ಥಾನ ಮತ್ತು ಯಮುನೋತ್ರಿ ದೇವಸ್ಥಾನಗಳು 19 ಏಪ್ರಿಲ್ 2026 ರಂದು ಅಕ್ಷಯ ತೃತೀಯದಂದು ಭಕ್ತರಿಗೆ ಮುಕ್ತವಾಗಲಿವೆ.
ಎತ್ತರ ಪ್ರದೇಶವಾಗಿರುವುದರಿಂದ ಯಾತ್ರಿಕರು ಹವಾಮಾನ ಹಾಗೂ ವಸತಿ ಸಿದ್ಧತೆಗಳನ್ನು ಮುಂಚಿತವಾಗಿ ಮಾಡಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
